ಬೆಂಗಳೂರು: ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ ಭೂಮಿಯನ್ನು ಸಮಾಜ ಕಲ್ಯಾಣ ಇಲಾಖೆಯ ಭೂಮಿಯೊಂದಿಗೆ ಬದಲಾಯಿಸಿಕೊಳ್ಳುವ ಸಂಬಂಧ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುಮನಹಳ್ಳಿ ಮಾಗಡಿ ರಸ್ತೆಯಲ್ಲಿರುವ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಜಮೀನು, ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆಸಲು ಉದ್ದೇಶಿಸಿರುವ ಡಾ. ಬಾಬೂ ಜಗಜೀವನ್ ರಾಂ ಸಂಶೋಧನಾ ಸಂಸ್ಥೆಯ ಸಭಾಂಗಣವನ್ನು ಮಂಗಳವಾರ ಪರಿಶೀಲಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಪ್ರಾಧಿಕಾರಕ್ಕೆ ಮಂಜೂರಾಗಿರುವ ಜಾಗವನ್ನು ಸಮಾಜ ಕಲ್ಯಾಣ ಇಲಾಖೆ ಜಾಗದ ಜೊತೆ ಬದಲಾಯಿಸಿಕೊಂಡರೆ, ಮತ್ತೊಂದು ಸಭಾಂಗಣ ನಿರ್ಮಾಣ ಮಾಡುವ ಅಗತ್ಯ ಇರುವುದಿಲ್ಲ ಎಂದು ಸ್ಥಳೀಯ ನಾಯಕರು ಸಲಹೆ ನೀಡಿದರು. ಮುಂದೆ ಮೆಟ್ರೊ ಮಾರ್ಗ ಇಲ್ಲೇ ಬರಲಿದ್ದು, ನಿಲ್ದಾಣವನ್ನೂ ನಿರ್ಮಿಸಲಾಗುತ್ತದೆ. ಹೀಗಾಗಿ, ಜಾಗ ಬದಲಿಸುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗುತ್ತದೆ’ ಎಂದು ತಿಳಿಸಿದರು.
‘ಈ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಡಾ. ಬಾಬೂ ಜಗಜೀವನ್ ರಾಂ ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಿದ್ದೇವೆ. ಸಮೀಪದಲ್ಲೇ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನಿಗದಿ ಮಾಡಲಾಗಿದೆ. ಆ ಜಾಗದಲ್ಲಿ ಜೂನ್ 27ರಂದು ಶಂಕುಸ್ಥಾಪನೆ ಮಾಡಿ, ನಂತರ ಕೆಂಪೇಗೌಡ ಜಯಂತಿ ಆಚರಿಸಲಾಗುತ್ತದೆ. ಕೆಂಪೇಗೌಡರ ಇತಿಹಾಸ ಸಾರುವ ವಸ್ತುಪ್ರದರ್ಶನ ಕೇಂದ್ರವನ್ನೂ ನಿರ್ಮಾಣ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
‘ಈ ಜಾಗ ದೂರ ಆಗಲಿಲ್ಲವೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಬೆಂಗಳೂರು ಬೆಳೆದಿದೆ ಏನು ಮಾಡುತ್ತೀರಿ? ಬೇರೆ ಎಲ್ಲಿ ಜಾಗ ನೀಡುತ್ತೀರಿ? ಗಾಲ್ಫ್ ಕೋರ್ಸ್, ಕಬ್ಬನ್ ಪಾರ್ಕ್, ರೇಸ್ ಕೋರ್ಸ್ ಬಿಡಲು ಯಾರೂ ಸಿದ್ಧರಿಲ್ಲ. ಮತ್ತೆ ಬೇರೆ ಎಲ್ಲಿ ಜಾಗ ಇದೆ? ಮಂತ್ರಿಗಳ ಮನೆ, ನ್ಯಾಯಾಧೀಶರಿಗೆ ಹೊಸ ಮನೆ, ಹೈಕೋರ್ಟ್ ಮಾಡಲು ಬೆಂಗಳೂರು ಮಧ್ಯಭಾಗದಲ್ಲಿ ಜಾಗ ಇಲ್ಲ. ಹೀಗಾಗಿ ಇಲ್ಲಿ ಜಾಗ ನೀಡಿದ್ದೇವೆ’ ಎಂದು ತಿಳಿಸಿದರು.
ಸ್ಕೈಡೆಕ್: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸುಮಾರು 25 ಎಕರೆ ಪ್ರದೇಶದಲ್ಲಿ ಸ್ಕೈಡೆಕ್ ನಿರ್ಮಾಣ ಮಾಡುವ ಸ್ಥಳವನ್ನೂ ಡಿ.ಕೆ. ಶಿವಕುಮಾರ್ ಪರಿಶೀಲಿಸಿದರು. ಬಿಡಿಎ ಅಧಿಕಾರಿಗಳು ನಕ್ಷೆಯೊಂದಿಗೆ ಸ್ಥಳದ ಮಾಹಿತಿ ನೀಡಿದರು.
ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಹಾಗೂ ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ನಡುವೆ ಬಿಡಿಎ ನಿರ್ಮಿಸುತ್ತಿರುವ ‘ಪ್ರಮುಖ ರಸ್ತೆ’ಗೂ ಸಂಪರ್ಕಿಸುವ ಸ್ಥಳದಲ್ಲಿ ಸ್ಕೈಡೆಕ್ ನಿರ್ಮಾಣವಾಗಲಿದೆ. ಈ ಸ್ಥಳದಲ್ಲಿ ನಿವೇಶನವನ್ನು ಈಗಾಗಲೇ ಗುರುತು ಮಾಡಲಾಗಿದೆ. ಅದನ್ನು ಬದಲಿಸಿ, ಸ್ಕೈಡೆಕ್ಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.