ADVERTISEMENT

ಟಿಪ್ಪರ್ ಚಕ್ರದಡಿ ಸಿಲುಕಿ ಬಿ.ಕಾಂ ವಿದ್ಯಾರ್ಥಿನಿ ಸಾವು

ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಸರಿತಾ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 20:39 IST
Last Updated 21 ಜನವರಿ 2023, 20:39 IST

ಬೆಂಗಳೂರು: ಕೆಂಗೇರಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ್ದು, ಟಿಪ್ಪರ್ ಚಕ್ರದಡಿ ಸಿಲುಕಿ ಸರಿತಾ (21) ಎಂಬುವವರು ಮೃತಪಟ್ಟಿದ್ದಾರೆ.

‘ವಿಜಯನಗರ ನಿವಾಸಿ ಸರಿತಾ, ಸ್ಥಳೀಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಓದುವುದರಲ್ಲಿ ಆಸಕ್ತಿ ಇದ್ದಿದ್ದರಿಂದ, ಮದುವೆ ಬಳಿಕವೂ ಅವರು ವಿದ್ಯಾಭ್ಯಾಸ ಮುಂದುವರಿಸಿದ್ದರು’ ಎಂದು ಕೆಂಗೇರಿ ಸಂಚಾರ ಪೊಲೀಸರು ಹೇಳಿದರು.

‘ಸರಿತಾ ಅವರು ಸ್ನೇಹಿತೆ ಅನಿತಾ (20) ಜೊತೆ ಶುಕ್ರವಾರ ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಅನಿತಾ ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೆ ಕಾರಣ ಎನ್ನಲಾದ ಟಿಪ್ಪರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಟಿಪ್ಪರ್ ಸ್ಥಳದಲ್ಲೇ ಬಿಟ್ಟು ಆತ ಪರಾರಿಯಾಗಿದ್ದಾನೆ’ ಎಂದು ತಿಳಿಸಿದರು.

ADVERTISEMENT

10 ಮೀಟರ್‌ವರೆಗೆ ಉಜ್ಜಿಕೊಂಡು ಹೋದ ಚಕ್ರ: ‘ದೇವಸ್ಥಾನಕ್ಕೆ ಹೋಗಿದ್ದ ಸರಿತಾ ಹಾಗೂ ಅನಿತಾ, ವಾಪಸು ಮನೆಯತ್ತ ತೆರಳುತ್ತಿದ್ದರು. ಸರಿತಾ ಅವರೇ ವಾಹನ ಚಲಾಯಿಸುತ್ತಿದ್ದರು. ಹಿಂಬದಿಯಲ್ಲಿ ಅನಿತಾ ಕುಳಿತಿದ್ದರು. ನೈಸ್ ರಸ್ತೆ ಕಡೆಯಿಂದ ಕೆಂಗೇರಿ ಕಡೆ ದ್ವಿಚಕ್ರ ವಾಹನ ಹೊರಟಿತ್ತು’ ಎಂದು ಪೊಲೀಸರು ಹೇಳಿದರು.

‘ಅದೇ ಮಾರ್ಗದಲ್ಲಿ ಹೊರಟಿದ್ದ ಆರೋಪಿತ ಚಾಲಕ, ಅತೀ ವೇಗವಾಗಿ ನಿರ್ಲಕ್ಷ್ಯದಿಂದ ಟಿಪ್ಪರ್ ಚಲಾಯಿಸಿದ್ದ. ಇದರಿಂದಾಗಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಗುದ್ದಿತ್ತು. ರಸ್ತೆಗೆ ಬಿದ್ದ ಸರಿತಾ ಮೇಲೆಯೇ ಟಿಪ್ಪರ್ ಚಕ್ರ ಹರಿದು, 10 ಮೀಟರ್‌ವರೆಗೂ ಉಜ್ಜಿಕೊಂಡು ಹೋಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ತೀವ್ರ ಗಾಯಗೊಂಡು ಸರಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅನಿತಾ ಸ್ಥಿತಿಯೂ ಚಿಂತಾಜನಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.