ಕೆಂಗೇರಿ: ಆರೋಗ್ಯವಂತ ಸಮಾಜ ನಿರ್ಮಾಣ ದೇಶದ ಪ್ರಮುಖ ಆದ್ಯತೆ ಎಂದು ಆಯುಷ್ ಇಲಾಖೆಯ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಹೇಳಿದರು.
ಕನಕಪುರ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪ್ರಾದೇಶಿಕ ಆಯುರ್ವೇದ ಸಂಶೋಧನಾ ಕೇಂದ್ರದ ಹೆಚ್ಚುವರಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಆರೋಗ್ಯವಂತ ಸಮಾಜದಿಂದ ದೇಶದ ಅಭಿವೃದ್ಧಿಯ ಗತಿ ಬದಲಾಗುತ್ತದೆ. ಈ ವಿಷಯವನ್ನು ಅರಿತಿರುವ ಕೇಂದ್ರ ಸರ್ಕಾರ ಹಲವಾರು ಆರೋಗ್ಯ ಯೋಜನೆಗಳನ್ನು ರೂಪಿಸಿದೆ. ಜನೌಷಧಿ ಮಳಿಗೆ ಸ್ಥಾಪನೆ, ಜೀವ ರಕ್ಷಕ ಔಷಧಗಳ ಬೆಲೆಯಲ್ಲಿ ಮಾಡಿರುವ ಗಣನೀಯ ಇಳಿಕೆಯಿಂದ ಸಮಗ್ರ ಜನತೆ ಅತಿ ಕಡಿಮೆ ದರದಲ್ಲಿ ಔಷಧಿ ಹಾಗೂ ಶಸ್ತ್ರಚಿಕಿತ್ಸೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದರು. ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆ, ಬಂಜೆತನದಂತಹ ಹಲವು ಕಾಯಿಲೆಗಳಿಗೆ ಆಯುರ್ವೇದದಿಂದ ಶಾಶ್ವತ ಪರಿಹಾರ ದೊರಕಲಿದೆ ಎಂದರು.
‘ಬದಲಾದ ಸಾಮಾಜಿಕ ವ್ಯವ್ಯಸ್ಥೆಯಲ್ಲಿ ಪೋಷಕರು ತಮ್ಮ ಮಕ್ಕಳ ವಿದ್ಯಾರ್ಜನೆಯತ್ತ ಮಾತ್ರ ಗಮನ ನೀಡುತ್ತಿದ್ದಾರೆ. ಇದರಿಂದ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಹಿನ್ನಡೆಯಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ ಆತಂಕ ವ್ಯಕ್ತಪಡಿಸಿದರು. ಭಾರತೀಯ ಮೂಲದ ಶಿಕ್ಷಣ ಪದ್ಧತಿಯಲ್ಲಿ ವಿದ್ಯೆಯೊಂದಿಗೆ ದೈಹಿಕ ಸ್ವಾಸ್ಥ್ಯವನ್ನು ವೃದ್ಧಿಸುವ ಕ್ರೀಡೆಗಳ ಕಡೆಗೂ ಗಮನ ನೀಡಲಾಗುತ್ತಿತ್ತು. ಪ್ರಸಕ್ತ ಶಿಕ್ಷಣ ಪದ್ಧತಿಯು ಮಕ್ಕಳನ್ನು ಬೌದ್ಧಿಕವಾಗಿ ಪ್ರಬುದ್ಧಗೊಳಿಸಿದರೂ ದೈಹಿಕವಾಗಿ ಸದೃಢವಾಗಿಸಲು ವಿಫಲವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಎಸ್.ಟಿ.ಸೋಮಶೇಖರ್, ಬಿಬಿಎಂಪಿ ಸದಸ್ಯ ಆರ್ಯ ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.