ಬೆಂಗಳೂರು: ಮಾದಕ ವಸ್ತುಗಳಾದ ಎಂಡಿಎಂಎ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಮೂವರು ಆರೋಪಿಗಳನ್ನು ಜೆ.ಸಿ. ನಗರ ಪೊಲೀಸರು ಬಂಧಿಸಿದ್ದಾರೆ.
ಕಾಡುಗೋಡಿಯಲ್ಲಿ ವಾಸವಿದ್ದ ಜಿಂಡೋಜೇಮ್ಸ್ (29), ಅತ್ತಿಬೆಲೆಯ ಆದರ್ಶ (27) ಹಾಗೂ ಇನ್ಮೇಶ್ (32) ಬಂಧಿತರು.
ಜೆ.ಸಿ. ನಗರ ಠಾಣಾ ವ್ಯಾಪ್ತಿಯ ಬೋರ್ಬಂಕ್ ರಸ್ತೆಯಲ್ಲಿ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ₹25 ಲಕ್ಷ ಮೌಲ್ಯದ 45 ಕೆ.ಜಿ ಗಾಂಜಾ, 70 ಗ್ರಾಂ ಎಂಡಿಎಂಎ, ಒಂದು ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಜಾಲಹಳ್ಳಿ ಠಾಣೆ ವ್ಯಾಪ್ತಿಯ ಗಾಂಜಾ ಮಾರಾಟ ಪ್ರಕರಣದಲ್ಲಿ ಜೈಲಿನಲ್ಲಿರುವ ಲೂಬಿನ್ ಅಮಲ್ ನಾಥ್ ಎಂಬುವನಿಂದ ಆರೋಪಿಗಳು ಈ ಹಿಂದೆ ಗಾಂಜಾ ಖರೀದಿಸಿ, ಸೇವನೆ ಮಾಡುತ್ತಿದ್ದರು.
ಅಮಲ್ ನಾಥ್ನಿಂದ ಗಾಂಜಾ ಮಾರುವ ಮಾಹಿತಿ ಪಡೆದಿದ್ದ ಆರೋಪಿಗಳು, ವ್ಯಕ್ತಿಯೊಬ್ಬರಿಂದ ವಿಶಾಖಪಟ್ಟಣ ಹಾಗೂ ಆಂಧ್ರಪ್ರದೇಶದ ಗಡಿ ಭಾಗಗಳಿಂದ ಕಾರು, ಟ್ರಕ್ ಹಾಗೂ ಲಾರಿಗಳಲ್ಲಿ ಗಾಂಜಾ ತರಿಸಿಕೊಂಡು ಅತ್ತಿಬೆಲೆಯಲ್ಲಿ ತಾವು ವಾಸವಿರುವ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು. ಬಳಿಕ ಅಲ್ಲಿಂದ ಗಾಂಜಾ ಮಾರಾಟ ನಡೆಯುತ್ತಿತ್ತು ಎನ್ನಲಾಗಿದೆ.
ಕೊತ್ತನೂರು ಬಳಿ ನೈಜೀರಿಯಾ ಮೂಲದ ವ್ಯಕ್ತಿಯೊಬ್ಬನಿಂದ ಎಂಡಿಎಂಎ ಖರೀದಿಸಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.