ADVERTISEMENT

ಫೈನಾನ್ಶಿಯರ್ ಅಪಹರಣ: 7 ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 23:26 IST
Last Updated 25 ಸೆಪ್ಟೆಂಬರ್ 2020, 23:26 IST

ಬೆಂಗಳೂರು/ನಾಗಮಂಗಲ: ಬೆಂಗಳೂರಿನ ಫೈನಾನ್ಶಿಯರ್ ನವೀನ್ (31) ಎಂಬುವರನ್ನು ಅಪಹರಿಸಿ ವಸತಿ ಗೃಹವೊಂದರಲ್ಲಿ ಅಕ್ರಮ ಬಂಧನ ದಲ್ಲಿಟ್ಟಿದ್ದ ಏಳು ಆರೋಪಿಗಳನ್ನು ನಾಗಮಂಗಲ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬೆಂಗಳೂರು ವಿದ್ಯಾರಣ್ಯಪುರದ ಮಹೇಶ್, ಮೋಹನ್, ನವ್ಯಂತ್, ಭರತ್, ಜೋಸೆಫ್, ರವಿಕಿರಣ್ ಹಾಗೂ ರಾಜು ಬಂಧಿತರು. ಅವರೆಲ್ಲರನ್ನೂ ಬೆಂಗಳೂರಿನ ತಿಲಕ್‌ನಗರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

‘ಕಾರುಗಳಿಗೆ ಸಾಲು ನೀಡುತ್ತಿದ್ದ ನವೀನ್‌ ಹಾಗೂ ಆರೋಪಿಗಳ ನಡುವೆ ವೈಷಮ್ಯ ಬೆಳೆದಿತ್ತು. ಹಲವು ಬಾರಿ ಜಗಳವೂ ನಡೆದಿತ್ತು. ಅದೇ ಕಾರಣಕ್ಕೆ ಆರೋಪಿಗಳು, ತಿಲಕ್‌ನಗರ ಠಾಣೆ ವ್ಯಾಪ್ತಿಯಲ್ಲಿದ್ದ ನವೀನ್‌ ಅವರನ್ನು ಗುರುವಾರ ಕಾರಿನಲ್ಲಿ ಅಪಹರಿಸಿ ನಾಗ ಮಂಗಲಕ್ಕೆ ಕರೆದೊಯ್ದಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಸ್ಥಳೀಯ ಸ್ನೇಹಿತರ ಸಹಾಯದಿಂದ ನಾಗಮಂಗಲದ ಎಸ್‌.ಎಲ್‌.ಎನ್‌ ವಸತಿಗೃಹದಲ್ಲಿ ಎರಡು ಕೊಠಡಿ ಕಾಯ್ದಿ ರಿಸಿಕೊಂಡು ಆರೋಪಿಗಳು ಉಳಿದುಕೊಂಡಿದ್ದರು. ಒಂದು ಕೊಠಡಿಯಲ್ಲಿ ನವೀನ್‌ ಅವರನ್ನು ಅಕ್ರಮ ಬಂಧನದಲ್ಲಿಟ್ಟಿದ್ದರು.‌ ಆರೋಪಿಗಳಿಂದ ತಪ್ಪಿಸಿಕೊಂಡಿದ್ದ ನವೀನ್, ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.’ ‘ನವೀನ್‌ ಅವರ ತಂದೆ ವಿ. ನಾಗರಾಜು ತಿಲಕ್‌ನಗರ ಠಾಣೆಗೆ ದೂರು ನೀಡಿ ದ್ದರು. ಆರೋಪಿಗಳು ನಾಗಮಂಗಲದಲ್ಲಿದ್ದ ಮಾಹಿತಿ ಗೊತ್ತಿದ್ದ ರಿಂದ ಅಲ್ಲಿಯ ಠಾಣೆಗೆ ಮಾಹಿತಿ ನೀಡಲಾಗಿತ್ತು. ಪಿಎಸ್‌ಐ ರವಿಕಿರಣ್‌ ನೇತೃತ್ವದ ತಂಡ, ವಸತಿ ಗೃಹದ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದೆ’ ಎಂದೂ ಪೊಲೀಸರು ವಿವರಿಸಿದರು.

ಸುನಾಮಿ ಕಿಟ್ಟಿ ಭಾಗಿ
‘ಬಿಗ್‌ಬಾಸ್’ ರಿಯಾಲಿಟಿ ಶೋ ಖ್ಯಾತಿಯ ಸುನಾಮಿ ಕಿಟ್ಟಿ ಸಹ ಅಪಹರಣ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಕಿಟ್ಟಿ ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ’ ಎಂದು ಪೊಲೀಸರು ಹೇಳಿದರು.

‘ಕಾರಿಗೆ ಫೈನಾನ್ಸ್ ಮಾಡುವ ವಿಚಾರವಾಗಿ ನವೀನ್ ಹಾಗೂ ಇತರೆ ಆರೋಪಿಗಳ ನಡುವೆ ಜಗಳವಿತ್ತು. ಮಧ್ಯಪ್ರವೇಶಿಸಿದ್ದ ಸುನಾಮಿ ಕಿಟ್ಟಿ, ಅಪಹರಣದ ಸಂಚಿನಲ್ಲಿ ಭಾಗಿಯಾಗಿದ್ದ. ಅಪಹರಣದ ವೇಳೆ ಆತನೂ ಕಾರಿನಲ್ಲಿದ್ದ ಎಂಬ ಮಾಹಿತಿ ಇದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.