ಬೆಂಗಳೂರು: ಕೊಡಿಗೇಹಳ್ಳಿಯಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅದರ ಪಕ್ಕದಲ್ಲಿರುವ ಪೊಲೀಸ್ ಠಾಣೆಯ ಕಟ್ಟಡ ಕುಸಿಯುವ ಭಯ ಸಿಬ್ಬಂದಿಯನ್ನು ಕಾಡುತ್ತಿದೆ.
ಕಾಮಗಾರಿ ಶುರುವಾಗಿ ಹಲವು ದಿನಗಳಾಗಿದ್ದು, ಭಯದಲ್ಲೇ ಪೊಲೀಸರು ಕೆಲಸ ಮಾಡುತ್ತಿದ್ದರು. ಹಾಗಾಗಿ, ಠಾಣೆಯನ್ನು ಮಾರುತಿ ನಗರದಲ್ಲಿರುವ ಸಮುದಾಯ ಭವನಕ್ಕೆ (ಬಾಬು ಜಗಜೀವನ ರಾಮ್ ಭವನ) ಸ್ಥಳಾಂತರಿಸಿದ್ದಾರೆ.
‘ಕೊಡಿಗೇಹಳ್ಳಿ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಒಡೆತನದ ಜಾಗವಿಲ್ಲ. ಹೀಗಾಗಿ, ರೈಲ್ವೆ ಕೆಳ ಸೇತುವೆ ಪಕ್ಕದಲ್ಲಿ ಇದ್ದ ಬಾಡಿಗೆ ಕಟ್ಟಡದಲ್ಲೇ ಠಾಣೆ ತೆರೆಯಲಾಗಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ರೈಲ್ವೆ ಕೆಳ ಸೇತುವೆ ಕುಸಿದು ಬೀಳುವ ಹಂತಕ್ಕೆ ತಲುಪಿತ್ತು. ಅದರ ಪಕ್ಕದಲ್ಲೇ ಇರುವ ಠಾಣೆ ಸಹ ಕುಸಿಯಬಹುದೆಂಬ ಭೀತಿ ಸಿಬ್ಬಂದಿಗೆ ಇತ್ತು. ಕೆಲವು ದಿನಗಳ ಹಿಂದೆಯೇ ಸೇತುವೆ ನಿರ್ಮಾಣ ಕೆಲಸ ಆರಂಭವಾಗಿದ್ದು, ಅಂದಿನಿಂದಲೂ ಠಾಣೆಯಲ್ಲಿ ಕುಳಿತುಕೊಳ್ಳಲು ಸಿಬ್ಬಂದಿ ಭಯಪಡುತ್ತಿದ್ದರು’ ಎಂದರು.
‘ಠಾಣೆಯನ್ನು ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಗಿದೆ. ಸಾರ್ವಜನಿಕರು ಯಾವುದೇ ದೂರುಗಳಿದ್ದರೆ ಅಲ್ಲಿಯೇ ನೀಡಬಹುದು’ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.