ADVERTISEMENT

ಕೆಪಿಎಸ್‌ಸಿ: ಕರೀಗೌಡ ನೇಮಕಕ್ಕೆ ವಿರೋಧ

ರಾಜ್ಯಪಾಲರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 19:04 IST
Last Updated 28 ಡಿಸೆಂಬರ್ 2018, 19:04 IST

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರನ್ನಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಹಾಗೂ ಸದಸ್ಯರನ್ನಾಗಿ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ಅವರನ್ನು ನೇಮಕ ಮಾಡಬಾರದು’ ಎಂದು ಒತ್ತಾಯಿಸಿ ‘ನ್ಯಾಯಾಂಗ ಹೊಣೆಗಾರಿಕೆ ಸಮಿತಿ’ಯು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಸಲ್ಲಿಸಿದೆ.

‘ಈ ಇಬ್ಬರೂ ಅಧಿಕಾರಿಗಳ ವಿರುದ್ಧ ಗುರುತರ ಆರೋಪಗಳಿವೆ. ಇವರ ನೇಮಕದಿಂದ ಕೆಪಿಎಸ್‌ಸಿ ಮೇಲೆ ಮತ್ತಷ್ಟು ಕಳಂಕ ಮೆತ್ತಿಕೊಳ್ಳಲಿದೆ. ರಾಜ್ಯ ಸರ್ಕಾರ ಒಂದು ವೇಳೆ ಇವರ ಹೆಸರನ್ನು ಶಿಫಾರಸು ಮಾಡಿದರೆ ರಾಜ್ಯಪಾಲರು ತಿರಸ್ಕರಿಸಬೇಕು’ ಎಂದು ಮನವಿ ಮಾಡಿದೆ.

‘1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿಯಲ್ಲಿ ಕರೀಗೌಡ ಅವರು ಉ‍ಪವಿಭಾಗಾಧಿಕಾರಿಯಾಗಿ ಹಾಗೂ ನಾಗರಾಜ್ ಅವರು ತಹಶೀಲ್ದಾರ್‌ ಆಗಿ ಆಯ್ಕೆಯಾದರು. ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಹಲವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ನೇಮಕಾತಿ ಪ್ರಕ್ರಿಯೆಯೇ ಅಸಂವಿಧಾನಿಕ ಎಂದು ತೀರ್ಪು ನೀಡಿದೆ. ಈ ಅಕ್ರಮದ ಲಾಭವನ್ನು ಪಡೆದವರಲ್ಲಿ ಕರೀಗೌಡ ಒಬ್ಬರು ಎಂದು ಸತ್ಯಶೋಧನಾ ಸಮಿತಿ ವರದಿ ಸಲ್ಲಿಸಿದೆ. ಇಂತಹ ಭ್ರಷ್ಟ ಅಧಿಕಾರಿಯನ್ನು ನೇಮಕ ಮಾಡಬಾರದು’ ಎಂದು ಸಮಿತಿಯ ಅಧ್ಯಕ್ಷ ಎಸ್‌.ಶಿವಕುಮಾರ್‌, ಸಮಾಜ ಪರಿವರ್ತನಾ ಟ್ರಸ್ಟ್‌ನ ಸಂಸ್ಥಾಪಕ ಎಸ್‌.ಆರ್‌.ಹಿರೇಮಠ, ಜನಸಂಗ್ರಾಮ ಪರಿಷತ್‌ನ ಕಾರ್ಯಾಧ್ಯಕ್ಷ ದೀಪಕ್‌ ಸಿ.ಎನ್‌. ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.