ADVERTISEMENT

ಕೆಪಿಎಸ್ಸಿ ಪರೀಕ್ಷೆ: ಅಕ್ರಮ ಎಸಗಿದ 84 ಮಂದಿ ಅನರ್ಹ

ಉತ್ತೀರ್ಣಕ್ಕಾಗಿ ಉತ್ತರ ಪತ್ರಿಕೆಯಲ್ಲಿ ಅಭ್ಯರ್ಥಿಗಳ ಅಳಲು

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 21:53 IST
Last Updated 3 ಜುಲೈ 2020, 21:53 IST
ಕೆಪಿಎಸ್ಸಿ
ಕೆಪಿಎಸ್ಸಿ   

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ 2018ರಲ್ಲಿ ನಡೆಸಿದ ವಿವಿಧ ಇಲಾಖೆಗಳ ಪ್ರತ್ಯೇಕ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದ ಕಾರಣಕ್ಕೆ 20 ಅಂಧರೂ ಸೇರಿ ಒಟ್ಟು 84 ಮಂದಿಯನ್ನು ಅನರ್ಹಗೊಳಿಸಲಾಗಿದೆ.

ಸರ್ಕಾರ ನಿಗದಿ ಮಾಡಿದ ಪ್ರಮಾಣದಲ್ಲಿ ಅಂಧತ್ವ ಇರಲಿಲ್ಲ ಎಂಬ ಕಾರಣಕ್ಕೆ 20 ಅಭ್ಯರ್ಥಿಗಳು ಅನರ್ಹರಾದರೆ, ಉಳಿದ 64 ಮಂದಿ ಅಭ್ಯರ್ಥಿಗಳು ತಮ್ಮ ಉತ್ತರ ಪತ್ರಿಕೆಗಳಲ್ಲಿ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳನ್ನು ಬರೆದು ಉತ್ತೀರ್ಣ ಮಾಡುವಂತೆ ಅಳಲು ತೋಡಿಕೊಂಡಿದ್ದರು.

ಇದನ್ನು ಪರೀಕ್ಷಾ ಅಕ್ರಮ ಎಂದು ಪರಿಗಣಿಸಿರುವ ಕರ್ನಾಟಕ ಲೋಕಸೇವಾ ಆಯೋಗ ಅಭ್ಯರ್ಥಿತನವನ್ನೇ ರದ್ದು ಮಾಡಿ ದಂಡನೆ ವಿಧಿಸಿದೆ.

ADVERTISEMENT

ಅಂಧತ್ವ ಪ್ರಮಾಣದಲ್ಲಿ ವ್ಯತ್ಯಾಸ: 2018ರಫೆಬ್ರುವರಿಯಲ್ಲಿ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಲಿಪಿಕಾರರ ಸಹಾಯ ಪಡೆದು 20 ಅಂಧ ಅಭ್ಯರ್ಥಿಗಳು ಕನ್ನಡ ಮತ್ತು ಸ್ಪರ್ಧಾತ್ಮಕ ವಿಷಯಗಳ ಪರೀಕ್ಷೆಗಳನ್ನು ಬರೆದಿದ್ದರು. ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಅವರ ಅಂಧತ್ವಸರ್ಕಾರ ನಿಗದಿ ಮಾಡಿದ ಪ್ರಮಾಣಕ್ಕಿಂತಲೂ ಅಂದರೆ ಶೇ 40ಕ್ಕೂ ಕಡಿಮೆ ಇದ್ದಿದ್ದು ಬೆಳಕಿಗೆ ಬಂತು.

ಅಂಗವಿಕಲ ಮೀಸಲಾತಿ ಅಡಿ ಹುದ್ದೆಗಳಿಗೆ ಪರೀಕ್ಷೆ ಬರೆದ ನಂತರ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ವೈದ್ಯಕೀಯ ತಪಾಸಣೆಗೆ ಮಾಡಿಸುವುದು ಕಡ್ಡಾಯ. ಅದೇ ರೀತಿ 20 ಮಂದಿಯನ್ನು ಮಿಂಟೋ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ತಪ್ಪು ಮಾಹಿತಿ ನೀಡಿದ್ದು ಬೆಳಕಿಗೆ ಬಂದಿತು. ಇವರನ್ನು ಅನರ್ಹರು ಎಂದು ಮಿಂಟೋ ಆಸ್ಪತ್ರೆ ಪ್ರಮಾಣ ಪತ್ರ ನೀಡಿದೆ. ಇನ್ನೂ ಬಹಳಷ್ಟು ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿಲ್ಲ.

ಈ ಅಭ್ಯರ್ಥಿಗಳು ಪರೀಕ್ಷೆಗೂ ಮುನ್ನ ಜಿಲ್ಲಾ ಶಸ್ತ್ರ ಚಿಕಿತ್ಸಕರಿಂದ ನಿಗದಿ ಮಾಡಿದ ಅಂಧತ್ವದ ಬಗ್ಗೆ ಪ್ರಮಾಣ ಪತ್ರ ಪಡೆದು ಪರೀಕ್ಷೆಯಲ್ಲಿ ಲಿಪಿಕಾರರ ಸಹಾಯ ಪಡೆದು ಅಕ್ರಮ ಎಸಗಿದ್ದಾರೆ ಎಂದು ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.