ADVERTISEMENT

ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ವಿರುದ್ಧ ಅವಿಶ್ವಾಸ ನೋಟಿಸ್‌?

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 19:37 IST
Last Updated 1 ಮಾರ್ಚ್ 2020, 19:37 IST

ಬೆಂಗಳೂರು: ವಿಧಾನಸಭೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ಅವರ ವಿರುದ್ಧ ಅವಿಶ್ವಾಸ ನೋಟಿಸ್‌ ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ.

ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ, ಉಪಸಭಾಧ್ಯಕ್ಷ ಸ್ಥಾನವನ್ನು ಪಕ್ಷದ ಶಾಸಕರೊಬ್ಬರಿಗೆ ನೀಡಲು ನಿರ್ಧರಿಸಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ವಿಷಯವನ್ನು ಕೃಷ್ಣಾರೆಡ್ಡಿ ಅವರ ಗಮನಕ್ಕೆ ತಂದಿದ್ದು ರಾಜೀನಾಮೆ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಪಸಭಾಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ತಂದು ಹುದ್ದೆಯಿಂದ ಇಳಿಸಿದ ನಿದರ್ಶನ ವಿಧಾನಸಭೆಯಲ್ಲಿ ಈವರೆಗೆ ನಡೆದಿಲ್ಲ. ಉಪಾಧ್ಯಕ್ಷರಿಗೂ ಮುಜುಗರ ಆಗಬಾರದು. ಆದ್ದರಿಂದ ಅವರಾಗಿಯೇ ರಾಜೀನಾಮೆ ಕೊಟ್ಟರೆ ಹಾದಿ ಸುಗಮವಾಗುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರ.

ADVERTISEMENT

ಎರಡು ಬಾರಿ ಅವರಿಗೆ ಈ ವಿಷಯವನ್ನು ತಿಳಿಸಲಾಗಿದೆ. ಸೋಮವಾರ ಅವರಾಗಿಯೇ ರಾಜೀನಾಮೆ ನೀಡಿದರೆ ಸರಿ, ಇಲ್ಲವಾದರೆ ಮಂಗಳವಾರ ಅವರ ವಿರುದ್ಧ ಅವಿಶ್ವಾಸ ನೋಟಿಸ್‌ ನೀಡಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಆ ಭಾಗದ ಒಬ್ಬ ಶಾಸಕರಿಗೆ ಆ ಹುದ್ದೆಯನ್ನು ನೀಡುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.