ಬೆಂಗಳೂರು: ಉನ್ನತ ಶಿಕ್ಷಣವನ್ನು ಇನ್ನಷ್ಟು ಉದ್ಯಮಸ್ನೇಹಿ ಹಾಗೂ ಜ್ಞಾನ– ಕೌಶಲಗಳಿಂದ ಕೂಡಿದ ಸಮರ್ಥ ಮಾರ್ಗದರ್ಶಿಯನ್ನಾಗಿ ರೂಪಿಸಲು ಏಕರೂಪದ ಪಠ್ಯಕ್ರಮ ಜಾರಿಗೆ ತರುವ ಸಂಬಂಧ ಸಮಿತಿಗಳನ್ನು ರಚಿಸಲಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಏಪ್ರಿಲ್ 17ರಂದು ಎಲ್ಲಾ ವಿಶ್ವವಿದ್ಯಾಲಯ ಕುಲಪತಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದಾಗ ಈ ವಿಷಯ ಪ್ರಸ್ತಾಪಿಸಿದ್ದರು.
ಅದರಂತೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ನ (ಕೆಎಸ್ಎಚ್ಇಸಿ) ಕಾರ್ಯನಿರ್ವಾಯಹಕ ನಿರ್ದೇಶಕ ಡಾ.ಎಸ್.ಎ.ಕೋರಿ ಅವರು ಈ ಸಮಿತಿಗಳನ್ನು ರಚಿಸಿದ್ದಾರೆ.
ಕಲಾ ವಿಭಾಗದ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಏಕರೂಪದ ಪಠ್ಯ ರಚಿಸುವ ಸಮಿತಿಗೆ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ವಿಜ್ಞಾನ, ಬಿಸಿಎ, ಎಂಸಿಎಗೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್, ವಾಣಿಜ್ಯ ಮತ್ತು ಆಡಳಿತಕ್ಕೆ ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ.ರಾಮಚಂದ್ರ ಗೌಡ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನಕ್ಕೆ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಡಿಯಲ್ಲಿ (ಕೆಎಸ್ಒಯು) ಬರುವ ಎಲ್ಲ ವಿಷಯಗಳಿಗೆ ಕೆಎಸ್ಒಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಅವರನ್ನು ನಿಯೋಜಿಸಲಾಗಿದೆ.
ಈ ಎಲ್ಲ ಸಮಿತಿಗಳ ಮುಖ್ಯಸ್ಥರಿಗೆ ಜೂನ್ 30ರೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.