ಬೆಂಗಳೂರು: ಕುರುಬರ ಸಾಂಸ್ಕೃತಿಕ ಪರಿಷತ್ ವತಿಯಿಂದ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆ– 13 ಗ್ರಂಥಗಳ ಬಿಡುಗಡೆ ಸಮಾರಂಭ ಇದೇ 5ರಂದು ಸಂಜೆ 5ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಈ ಸಮಾರಂಭದಲ್ಲಿ ಕುರುಬ ಸಮುದಾಯದ ನಾಯಕರು ಪಕ್ಷಭೇದ ಮರೆತು ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ವಸತಿ ಸಚಿವ ಎಂಟಿಬಿ ನಾಗರಾಜ್, ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್, ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ, ಪಕ್ಷೇತರ ಶಾಸಕ ಆರ್.ಶಂಕರ್ ಪಾಲ್ಗೊಳ್ಳಲಿದ್ದಾರೆ ಎಂದು ಪರಿಷತ್ತಿನ ಅಧ್ಯಕ್ಷ ಎಚ್.ಎಂ.ರೇವಣ್ಣ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ
ತಿಳಿಸಿದರು.
‘ಕುರುಬರ ಪುರಾಣ, ಇತಿಹಾಸ, ಧರ್ಮ, ಸಾಹಿತ್ಯ, ಕಲೆ ಮತ್ತು ಕ್ರೀಡೆ, ಮಹಿಳೆ, ಆಧುನಿಕತೆ, ಆರ್ಥಿಕ, ಚಿತ್ರಕೋಶ, ಸಾಂಸ್ಕೃತಿಕ ಪದ ಕೋಶಗಳನ್ನು ಒಳಗೊಂಡ ಈ ಗ್ರಂಥಗಳು 6 ಸಾವಿರ ಪುಟಗಳನ್ನು ಒಳಗೊಂಡಿವೆ. 10 ವರ್ಷಗಳ ಶ್ರಮದಿಂದ ಈ ಯೋಜನೆ ಸಾಕಾರ
ಗೊಳ್ಳುತ್ತಿದೆ’ ಎಂದು ತಿಳಿಸಿದರು.
ಬೆಂಗಳೂರು ಉತ್ತರಕ್ಕೆ ಆಕಾಂಕ್ಷಿ: ರೇವಣ್ಣ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ಆಕಾಂಕ್ಷಿಯಾಗಿದ್ದೇನೆ ಎಂದು ಎಚ್.ಎಂ.ರೇವಣ್ಣ ತಿಳಿಸಿದರು.
‘ವಿಧಾನಸಭಾ ಚುನಾವಣೆಯಲ್ಲಿ ನನಗೆ ಮಾಗಡಿ ಅಥವಾ ಹೆಬ್ಬಾಳದಿಂದ ಟಿಕೆಟ್ ನೀಡಿರಲಿಲ್ಲ.ನನ್ನ ವಿಧಾನ ಪರಿಷತ್ ಸದಸ್ಯತ್ವ ಅವಧಿಯೂ ಮುಂದಿನ ವರ್ಷ ಮುಕ್ತಾಯವಾಗಲಿದೆ. ಪಕ್ಷದ ನಗರ ಘಟಕದ ಅಧ್ಯಕ್ಷನಾಗಿ 12 ವರ್ಷ ಕಾರ್ಯನಿರ್ವಹಿಸಿದ್ದೇನೆ. ನಗರದ ಜನರಿಗೆ ಚಿರಪರಿಚಿತ. ಹೀಗಾಗಿ, ಟಿಕೆಟ್ ಕೊಡಿ ಎಂದು ಕೇಳುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.