ನೆಲಮಂಗಲ: ‘ತಾಲ್ಲೂಕಿನ ಬ್ಯಾಡ ರಹಳ್ಳಿಯಲ್ಲಿ ಕುರುಬರ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ 1 ಎಕರೆ 5 ಗುಂಟೆ ಜಮೀನು ಮತ್ತು ₹70 ಲಕ್ಷ ಅನುದಾನವನ್ನು ನೀಡಲಾಗಿದೆ’ ಎಂದು ಶಾಸಕಕೆ.ಶ್ರೀನಿವಾಸಮೂರ್ತಿ ತಿಳಿಸಿದರು.
ಕುರುಬರ ಸಂಘದ ತಾಲ್ಲೂಕು ಘಟಕ ಮತ್ತು ಸ್ಥಳೀಯ ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ‘ಕನಕ ಜಯಂತಿ’ಯಲ್ಲಿ ಮಾತನಾಡಿದರು.
‘ಕನಕ ಸಹಕಾರಿ ಸಂಘಕ್ಕೆ ಪುರಸಭೆಯಿಂದ ಒಂದು ನಿವೇಶನ ಮತ್ತು ವಿದ್ಯಾರ್ಥಿ ನಿಲಯಕ್ಕೆ ₹ 25 ಲಕ್ಷ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.
ಬಸವಣ್ಣದೇವರ ಮಠದ ಸಿದ್ಧಲಿಂಗ ಸ್ವಾಮೀಜಿ ಕುರುಬ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಿದರು.
‘ಕನಕರು 500 ವರ್ಷಗಳ ಹಿಂದೆಯೇ ಕುಲ–ಕುಲ ಎಂದು ಹೊಡೆದಾಡದಿರಿ ಎಂದಿದ್ದಾರೆ. ಆದರೆ, ಇಂದು ಜಾತಿಯು ಪ್ರತಿಷ್ಠೆಯಾಗಿ ಸಮಾಜದಲ್ಲಿ ದ್ವೇಷದ ವಾತಾವರಣ ನಿರ್ಮಿಸುತ್ತಿದೆ. ಜಾತಿ ತಾರತಮ್ಯದಿಂದ ಹೊರಬಂದರೆ ಬಸವಣ್ಣ, ಕನಕದಾಸರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಆಗುತ್ತದೆ’ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ,‘ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಗಿನೆಲೆ ಪ್ರಾಧಿಕಾರ ಸ್ಥಾಪಿಸಲಾಯಿತು. ಹೊಸದುರ್ಗದಲ್ಲಿ 38 ಅಡಿ ಎತ್ತರದ ಕನಕದಾಸರಏಕಶಿಲಾ ಪುತ್ಥಳಿ ನಿರ್ಮಾಣವಾಗುತ್ತಿದೆ. ನಂದಗುಡಿಯಲ್ಲಿ ಸಂಗೊಳ್ಳಿ ರಾಯಣ್ಣರ ನೆನಪಿನಲ್ಲಿ ಸೈನಿಕ ಶಾಲೆ, ಸಂಗೊಳ್ಳಿಯಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣವಾಗುತ್ತಿದೆ’ ಎಂದು ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.