ADVERTISEMENT

ಮೊಬೈಲ್‌ನಲ್ಲಿ ಮಾತು: ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 16:27 IST
Last Updated 6 ಜೂನ್ 2022, 16:27 IST

ಬೆಂಗಳೂರು: ಅಕ್ಕಿಪೇಟೆ ವೃತ್ತದಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಐದನೇ ಮಹಡಿಯಿಂದ ಬಿದ್ದು ಕಾರ್ಮಿಕ ಧರ್ಮೇಂದ್ರಕುಮಾರ್ (22) ಮೃತಪಟ್ಟಿದ್ದಾರೆ.

‘ಬಿಹಾರದ ಧರ್ಮೇಂದ್ರಕುಮಾರ್, ಕೆಲ ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದರು. ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲೇ ಧರ್ಮೇಂದ್ರ ಹಾಗೂ ಇತರೆ ಕಾರ್ಮಿಕರು ವಾಸವಿದ್ದರು’ ಎಂದು ಕಾಟನ್‌ಪೇಟೆ ಪೊಲೀಸರು ಹೇಳಿದರು.

‘ಭಾನುವಾರ ರಾತ್ರಿ ಊಟ ಮುಗಿಸಿದ್ದ ಧರ್ಮೇಂದ್ರ ಕಟ್ಟಡದಲ್ಲೇ ಓಡಾಡುತ್ತಿದ್ದರು. ಅವರ ಮೊಬೈಲ್‌ಗೆ ಕರೆ ಬಂದಿತ್ತು. ಮಾತನಾಡುತ್ತಲೇ ಐದನೇ ಮಹಡಿಗೆ ಹೋಗಿದ್ದರು. ಅತ್ತಿತ್ತ ಓಡಾಡುತ್ತ ಕೆಲ ನಿಮಿಷ ಮೊಬೈಲ್‌ನಲ್ಲಿ ಮಾತನಾಡಿದ್ದ ಧರ್ಮೇಂದ್ರ, ಏಕಾಏಕಿ ಆಯತಪ್ಪಿ ನೆಲಮಹಡಿಗೆ ಬಿದ್ದಿದ್ದರು. ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದೂ ತಿಳಿಸಿದರು.

ADVERTISEMENT

ಮನೆಗೆ ಆಧಾರ: ‘ಕುಟುಂಬದ ಆಧಾರವಾಗಿದ್ದ ಧರ್ಮೇಂದ್ರಕುಮಾರ್, ಪ್ರತಿ ತಿಂಗಳು ಊರಿಗೆ ಹಣ ಕಳುಹಿಸುತ್ತಿದ್ದರು. ಇವರ ಸಾವಿನ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಅವರು ನಗರಕ್ಕೆ ಬಂದ ನಂತರವೇ ಮರಣೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.