ADVERTISEMENT

ಶಾಮನೂರು ಶುಗರ್ಸ್‌: ಉತ್ತರ ನೀಡದಿದ್ದಕ್ಕೆ ಸಿಟ್ಟಿಗೆದ್ದ ಬಿ.ಪಿ. ಹರೀಶ್‌

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2025, 15:51 IST
Last Updated 14 ಮಾರ್ಚ್ 2025, 15:51 IST
<div class="paragraphs"><p>ಬಿ.ಪಿ. ಹರೀಶ್‌ </p></div>

ಬಿ.ಪಿ. ಹರೀಶ್‌

   

ಬೆಂಗಳೂರು: ಶಾಮನೂರು ಶುಗರ್ಸ್‌ ಕಾರ್ಖಾನೆಗೆ ಜಮೀನು ಮಂಜೂರು ಮಾಡಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಗೆ ವಿಧಾನಮಂಡಲದ ಮೂರನೇ ಅಧಿವೇಶನದಲ್ಲೂ ಉತ್ತರ ನೀಡದೇ ಇರುವುದಕ್ಕೆ ಬಿಜೆಪಿಯ ಬಿ.ಪಿ. ಹರೀಶ್‌ ಅವರು ವಿಧಾನಸಭೆಯಲ್ಲಿ ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಶ್ನೋತ್ತರ ಕಲಾಪದ ಮಧ್ಯೆಯೇ ವಿಷಯ ಪ್ರಸ್ತಾಪಿಸಿದ ಅವರು, ‘ಸಭಾಧ್ಯಕ್ಷರೇ ನಾನು ಸತತ ಮೂರನೇ ಅಧಿವೇಶನದಲ್ಲಿ ಈ ಪ್ರಶ್ನೆ ಕೇಳಿದ್ದೇನೆ. ಈವರೆಗೆ ಉತ್ತರ ನೀಡಿಲ್ಲ. ಪ್ರಶ್ನೆಗಳ ಪಟ್ಟಿಯಲ್ಲೂ ಇಲ್ಲ. ಯಾವ ಕಾರಣದಿಂದ ಹೀಗೆ ಮಾಡಲಾಗುತ್ತಿದೆ? ಉತ್ತರ ಕೊಡದಂತೆ ತಡೆಯುತ್ತಿರುವವರು ಯಾರು’ ಎಂದು ಕೇಳಿದರು.

ADVERTISEMENT

‘ಶಾಮನೂರು ಸಕ್ಕರೆ ಕಾರ್ಖಾನೆಗೆ 50 ಎಕರೆ ಜಮೀನು ಮಂಜೂರು ಮಾಡಲಾಗಿದೆ. 20 ಎಕರೆ ಜಮೀನಿನಿಂದ ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸಲಾಗಿದೆ. ಸರ್ಕಾರಿ ಜಮೀನು ಕೂಡ ಅಲ್ಲಿದೆ. ₹3.5 ಕೋಟಿ ಪಾವತಿಸುವಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಸಕ್ಕರೆ ಕಾರ್ಖಾನೆಗೆ ಸೂಚಿಸಿತ್ತು. ಈವರೆಗೆ ಅವರು ಹಣ ಪಾವತಿಸಿಲ್ಲ. ಆದರೂ, ರೈತರ ಜಮೀನು ಕಿತ್ತು ಕಾರ್ಖಾನೆಗೆ ಕೊಡಲಾಗುತ್ತಿದೆ’ ಎಂದು ದೂರಿದರು.

‘ಶಾಮನೂರು ಶುಗರ್ಸ್‌ ಕಾರ್ಖಾನೆಗೆ ಸಂಬಂಧಿಸಿದ ಪ್ರಶ್ನೆ ಎಂಬ ಕಾರಣಕ್ಕೆ ಉತ್ತರ ನೀಡುತ್ತಿಲ್ಲವೆ? ಶಾಮನೂರು ವಿಚಾರ ಎಂಬ ಕಾರಣಕ್ಕೆ ನೀವೆಲ್ಲರೂ ಅವರ ಪರ ನಿಂತಿದ್ದೀರಾ’ ಎಂದು ಹರೀಶ್‌ ಕೇಳಿದರು.

ತನಿಖಾ ಸಮಿತಿ ರಚನೆ: ಪ್ರತಿಕ್ರಿಯೆ ನೀಡಿದ ಸಭಾಧ್ಯಕ್ಷ ಯು.ಟಿ. ಖಾದರ್‌, ‘ಈ ವಿಷಯದ ಬಗ್ಗೆ ನೀವು ಈಗಾಗಲೇ ನನ್ನನ್ನು ಭೇಟಿಮಾಡಿ ಚರ್ಚಿಸಿದ್ದೀರಿ. ಪ್ರಶ್ನೆಗಳಿಗೆ ಉತ್ತರ ನೀಡದೇ ಇರುವುದರ ಹಿಂದಿನ ಕಾರಣಗಳ ಕುರಿತು ತನಿಖೆ ನಡೆಸಲು ಉಪ ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದೇನೆ. ಅವರು ನೀಡುವ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದರು.

‘ನಿಮ್ಮ ಪ್ರಶ್ನೆಗೆ ತ್ವರಿತವಾಗಿ ಉತ್ತರ ಕೊಡಿಸುತ್ತೇನೆ. ನನ್ನ ಕಚೇರಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿಕೊಂಡು ನಿಮ್ಮ ಎದುರಿನಲ್ಲೇ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.