ದಾಬಸ್ ಪೇಟೆ: ಸೋಂಪುರ ಹೋಬಳಿಯ ಗಡಿ ಗ್ರಾಮ ಕುರುವೆಲ್ ತಿಮ್ಮನಹಳ್ಳಿ ಗ್ರಾಮದ ಆನಂದ್ ಎಂಬುವವರ ತೋಟದಲ್ಲಿ ಹಗಲಿನ ವೇಳೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಮಧ್ಯಾಹ್ನ 3 ಗಂಟೆಯಲ್ಲಿ ಆನಂದ್ ಅವರ ಮಕ್ಕಳು ಹಸುಗಳಿಗೆ ನೀರು ಕುಡಿಸಲು ತೋಟಕ್ಕೆ ಹೋಗಿದ್ದಾಗ ಅಡಿಕೆ ಗಿಡಗಳ ನಡುವೆ ಅಡಗಿದ್ದ ಚಿರತೆ ಹೊರಗಡೆ ಬಂದಿದೆ. ಚಿರತೆ ಕಂಡು ಮಕ್ಕಳು ಕಿರುಚುತ್ತಾ ಓಡಿದ್ದಾರೆ. ಅಕ್ಕ ಪಕ್ಕ ಇದ್ದ ಜನರು ಚಿರತೆಯನ್ನು ಓಡಿಸಿದ್ದಾರೆ.
‘ದನಗಳಿಗೆ ನೀರು ಕುಡಿಸಲು ನನ್ನ ತಂಗಿಯ ಜೊತೆಗೆ ಬಂದಿದ್ದೆ. ನಾವು ಮಾತಾಡುತ್ತಾ ಹೋಗುತ್ತಿದ್ದೆವು. ಮಾತಿನ ಸದ್ದು ಕೇಳಿ ಚಿರತೆ ಹೊರಬಂತು. ನಾವು ಭಯಗೊಂಡು ಕಿರುಚಿಕೊಂಡೆವು’ ಎಂದು ಬಾಲಕಿ ಯಶಸ್ವಿನಿ ವಿವರಿಸಿದರು.
‘ಒಂದು ತಿಂಗಳಲ್ಲಿ ಮೂರು ಬಾರಿ ಚಿರತೆ ಇಲ್ಲಿ ಕಾಣಿಸಿಕೊಂಡಿದೆ. ಹದಿನೈದು ದಿನಗಳ ಹಿಂದೆಯೂ ಬೆಳಿಗ್ಗೆ ಹೀಗೆ ಪೊದೆಯಿಂದ ಚಿರತೆ ಓಡಿ ಹೋಗಿದ್ದನ್ನು ಜನ ನೋಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿದು ದೂರ ಬಿಡಬೇಕು‘ ಎಂದು ಆನಂದ್ ಆಗ್ರಹಿಸಿದರು.
ಮಳೆ ಕೊರತೆ, ಮಾಕೇನಹಳ್ಳಿ ಗೋಮಾಳದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಅರಣ್ಯ ಪ್ರದೇಶ ಕಡಿಮೆಯಾಗಿ ಆಹಾರ ಸಿಗದೇ ಊರುಗಳತ್ತ ಚಿರತೆಗಳು ವಲಸೆ ಬರುತ್ತಿರುವೆ. ಕುರಿ, ಮೇಕೆ, ನಾಯಿ ಹೊತ್ತೊಯ್ಯುತ್ತಿವೆ. ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಈಗ ಹಗಲಿನಲ್ಲಿಯೇ ಕಾಣಿಸಿಕೊಳ್ಳುತ್ತಿವೆ ಎಂದು ರೈತ ವೀರಚಿಕ್ಕಯ್ಯ ಆತಂಕ ವ್ಯಕ್ತಪಡಿಸಿದರು.
‘ಸ್ಥಳಕ್ಕೆ ಹೋಗಿ ಚಿರತೆಯ ಚಲನವಲನಗಳ ಬಗ್ಗೆ ಗಮನಹರಿಸಿ, ಬೋನ್ ಇಟ್ಟು ಚಿರತೆ ಹಿಡಿದು ಬೇರೆ ಕಡೆ ಬಿಡಲಾಗುವುದು‘ ಎಂದು ನೆಲಮಂಗಲ ವಲಯ ಅರಣ್ಯಾಧಿಕಾರಿ ಶ್ರೀಧರ್ ಎಸ್. ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.