ADVERTISEMENT

ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಷಿ ಮೊಬೈಲ್ ಎಫ್‌ಎಸ್‌ಎಲ್‌ಗೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 16:41 IST
Last Updated 22 ಜುಲೈ 2025, 16:41 IST
<div class="paragraphs"><p>ಮೊಬೈಲ್</p></div>

ಮೊಬೈಲ್

   

ಬೆಂಗಳೂರು: ‌ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದ ಆರೋಪಿ ನಿಂಗಪ್ಪನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು, ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಷಿಗೆ ಸೇರಿದ್ದ ಮೊಬೈಲ್ ಅನ್ನು ಗುಜರಾತ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ರವಾನಿಸಿದ್ದಾರೆ.

ಆರೋಪಿ ನಿಂಗಪ್ಪ ಜತೆ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿರುವ ಲೋಕಾಯುಕ್ತ ಎಸ್.ಪಿ ಯಾಗಿದ್ದ ಶ್ರೀನಾಥ್ ಜೋಷಿ ಅವರಿಗೆ ನೋಟಿಸ್ ನೀಡಿದ್ದ ಲೋಕಾಯುಕ್ತ ಪೊಲೀಸರು, ಜುಲೈ 15ರಂದು ವಿಚಾರಣೆ ನಡೆಸಿದ್ದರು. ಆಗ ಜೋಷಿ ಅವರ ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ADVERTISEMENT

ಆ ಎರಡು ಮೊಬೈಲ್‌ಗಳ ಪೈಕಿ ಒಂದು ಮೊಬೈಲ್‌ಗೆ ಹಾನಿಯಾಗಿದ್ದು, ಅದರಲ್ಲಿರುವ ದತ್ತಾಂಶ ಮರುಸಂಗ್ರಹ ಮಾಡುವುದು ಸವಾಲಿನ ಕೆಲಸವಾಗಿದ್ದು, ಹೀಗಾಗಿ ಗುಜರಾತ್‌ನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅದರಲ್ಲಿರುವ ದತ್ತಾಂಶ ಮರುಸಂಗ್ರಹ ಆದ ನಂತರ, ಅದರಲ್ಲಿರುವ ದತ್ತಾಂಶದ ಆಧಾರದ ಮೇಲೆ ಜೋಷಿ ಅವರಿಗೆ ಮತ್ತೊಂದು ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಆರೋಪಿ ನಿಂಗಪ್ಪ ವಿಚಾರಣೆ ನಡೆಸಲು ಕಾನೂನಿನ ತೊಡಕು ಇದ್ದು, ಇದನ್ನು ಬಗೆಹರಿಸಲು ಲೋಕಾಯುಕ್ತ ಪೊಲೀಸರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಒಂದು ವೇಳೆ ನಿಂಗಪ್ಪ ವಿಚಾರಣೆಗೆ ನ್ಯಾಯಾಲಯ ಹಸಿರು ನಿಶಾನೆ ತೋರಿದರೆ ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.