ಬೆಂಗಳೂರು: ಮಹದೇವಪುರದ ವಲಯದಲ್ಲಿ ಪ್ರೆಸ್ಟೀಜ್, ಗೋಪಾಲನ್ ಶಾಲೆ, ಮಹಾವೀರ್ ಅಪಾರ್ಟ್ಮೆಂಟ್, ಸಾಯಿ ಕಣ್ಣಿನ ಆಸ್ಪತ್ರೆ ಸೇರಿ ರಾಜಕಾಲುವೆ ಮೇಲಿನ 15 ಒತ್ತುವರಿಯನ್ನು ಸೋಮ ವಾರ ತೆರವು ಮಾಡಿರುವ ಬಿಬಿಎಂಪಿ ಸಿಬ್ಬಂದಿ, ಸುಮಾರು ಒಂದು ಕಿ.ಮೀ ರಾಜಕಾಲುವೆಯನ್ನು ಮುಕ್ತಗೊಳಿಸಿದೆ.
ಅತಿ ಹೆಚ್ಚು ಮಳೆಯಿಂದ ಈ ತಿಂಗಳ ಮೊದಲ ವಾರದಲ್ಲಿ ಈ ಪ್ರದೇಶ ಜಲಾವೃತವಾಗಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿತ್ತು. ಅತಿ ಹೆಚ್ಚು ಅವ್ಯವಸ್ಥೆಗೆ ಒಳಗಾದ ಪ್ರದೇಶದಲ್ಲಿ ಆದ್ಯತೆ ಮೇರೆಗೆ ರಾಜಕಾಲುವೆ ಒತ್ತುವರಿಯನ್ನು ತೆರವು ಗೊಳಿಸುವ ಕಾರ್ಯಾಚರಣೆಗೆ ಐದು
ಪ್ರದೇಶಗಳಲ್ಲಿ ಚಾಲನೆ ನೀಡಲಾಗಿದೆ.
ಚಲ್ಲಘಟ್ಟ, ಚಿನ್ನಪ್ಪನ ಹಳ್ಳಿ, ಬಸವಣ್ಣನಗರ, ಸ್ಪೈಸಿ ಗಾರ್ಡನ್ ಹಾಗೂ ಬಸವನಪುರ ವಾರ್ಡ್ನ ಎಸ್.ಆರ್. ಲೇಔಟ್ ಕೇಂಬ್ರಿಡ್ಜ್ ಕಾಲೇಜು ಆವರಣದಲ್ಲಿ ಸರ್ವೇಯರ್ಗಳು ರಾಜಕಾಲುವೆ ಒತ್ತುವರಿ
ಯನ್ನು ಗುರುತು ಮಾಡಿದದರು. ಆ ಪ್ರದೇಶದಲ್ಲಿ ಪಾಲಿಕೆಯ ಅಧಿಕಾರಿಗಳು, ಮಾರ್ಷಲ್ಗಳ ತಂಡವು ಪೊಲೀಸ್ ಸಿಬ್ಬಂದಿ ಸಹಯೋಗದೊಂದಿಗೆ ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಿತು.
ಚಿನ್ನಪ್ಪನಹಳ್ಳಿಯಿಂದ ಮುನ್ನೇ ಕೊಳಾಲು ಕೆರೆಯ ನಡುವೆ ಎಇಸಿಎಸ್ ಲೇಔಟ್ ವ್ಯಾಪ್ತಿಯಲ್ಲಿ ಸಾಯಿ ಕಣ್ಣಿನ ಆಸ್ಪತ್ರೆ ಕಾಂಪೌಂಡ್, ರಾಗಂ ಮೆಘಾ ಸ್ಟೋರ್ ಮುಂಭಾಗದ ಒಳಹರಿವಿನ ಕಾಲುವೆ ಸೇರಿಮೂರು ಕಟ್ಟಡಗಳು, ನಾಲ್ಕು ಗೋಡೆ ಹಾಗೂ ರಸ್ತೆಯನ್ನು ತೆರವುಗೊಳಿಸಲಾಗಿದೆ ಎಂದು ಮಹ ದೇವಪುರ ವಲಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಘವೇಂದ್ರ ತಿಳಿಸಿದರು.
ಚಲ್ಲಘಟ್ಟ ವ್ಯಾಪ್ತಿಯಲ್ಲಿ ಪ್ರೆಸ್ಟೀಜ್ನ ಖಾಲಿ ಜಾಗ, ಗೋಡೆ ಹಾಗೂ ಹೂಡಿ ಬಳಿ ಗೋಪಾಲನ್ ಶಾಲೆ ಹಾಗೂ ಮಹಾವೀರ್ ಅಪಾರ್ಟ್ಮೆಂಟ್ ಗೋಡೆ, ಮುನ್ನೇನಕೊಳಾಲುನಲ್ಲಿ ಸ್ಪೈಸಿ ಗಾರ್ಡನ್ ಬಳಿ 4 ಗೋಡೆ ಹಾಗೂ ರಸ್ತೆ ತೆರವುಗೊಳಿಸಲಾಗಿದೆ. ಕೆ.ಆರ್.ಪುರದ ಬಸವನಪುರ ವಾರ್ಡ್ ಎಸ್.ಆರ್. ಲೇಔಟ್ ವ್ಯಾಪ್ತಿಯ ಕೇಂಬ್ರಿಡ್ಜ್ ಕಾಲೇಜು ಆವರಣದಲ್ಲಿ 77 ಮೀಟರ್ ಉದ್ದ ಹಾಗೂ 2.6 ಮೀಟರ್ ಅಗಲದ ನೀರುಗಾಲುವೆಯ ಮೇಲೆ ಅಳವಡಿಸಲಾಗಿದ್ದ ಸ್ಲ್ಯಾಬ್ಗಳನ್ನು ತೆಗೆಯಲಾಗಿದೆ. ಒತ್ತುವರಿ ತೆರವು ಕಾರ್ಯಚರಣೆ ನಡೆಸಿರುವ ಎಲ್ಲಾ ಕಡೆಗಳಲ್ಲಿಯೂ ಮತ್ತೊಮ್ಮೆ ಒತ್ತುವರಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ರಾಘವೇಂದ್ರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.