ಬೆಂಗಳೂರು: ‘ಮಹಾರಾಷ್ಟ್ರ ಸರ್ಕಾರ ಗಡಿ ವಿವಾದ ಕೆದಕಿದರೆ ಅದರ ವಿರುದ್ಧದ ಹೋರಾಟದ ನಾಯಕತ್ವ ವಹಿಸಲು ಸಿದ್ಧ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ತಿಳಿಸಿದ್ದಾರೆ.
‘ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕರ್ನಾಟಕದ ಜತೆಗಿನ ಗಡಿ ವಿವಾದ ಕೆದಕುವ ಕೆಲಸ ಮಾಡಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಯಾವುದೇ ರಾಜಿಗೆ ಮುಂದಾಗುವುದಿಲ್ಲ’ ಎಂದು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
‘ಭಾಷಾವಾರು ಪ್ರಾಂತ್ಯ ರಚನೆ ಆದಾಗಿನಿಂದ ಶಿವಸೇನೆಯಂಥ ಸಂಘಟನೆಗಳು ಹಾಗೂ ಅಲ್ಲಿನ ಸರ್ಕಾರಗಳು, ಬೆಳಗಾವಿ ಮತ್ತಿತರ ಗಡಿ ಪ್ರದೇಶಗಳು ತಮಗೆ ಸೇರಬೇಕು ಎಂದು ಆಗಾಗ ಕೂಗು ಹಾಕುತ್ತಲೇ ಇವೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳ ಗಡಿ ವಿವಾದ ಬಗೆಹರಿಸಲು 1960ರ ದಶಕದಲ್ಲಿ ರಚನೆಯಾಗಿದ್ದ ನ್ಯಾಯಮೂರ್ತಿ ಮಹಾಜನ್ ಆಯೋಗವು ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬುದಾಗಿ ಸಾರಿದೆ’ ಎಂದಿದ್ದಾರೆ.
‘ಗಡಿ ಪ್ರದೇಶದಲ್ಲಿ ವಾಸವಿರುವ ಕನ್ನಡಿಗರೇ ಆಗಲೀ, ಮರಾಠಿಗರೇ ಆಗಲಿ ಭಾಷೆ ಮತ್ತು ಗಡಿ ವಿಷಯದಲ್ಲಿ ಜಗಳವಾಡಿದವರಲ್ಲ. ಇಂಥ ಸೌಹಾರ್ದವನ್ನು ಹೆಚ್ಚಿಸಬೇಕೇ ಹೊರತು ಕೆಡಿಸುವ ಕೆಲಸವನ್ನು ಯಾರೂ ಮಾಡಬಾರದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.