ಬೆಂಗಳೂರು: ಬ್ಯಾಂಕ್ ನೌಕರರ ಮುಂದೆ ಸಾಕಷ್ಟು ಸವಾಲುಗಳಿವೆ. ಬದುಕಿಗಾಗಿ ಹೋರಾಡಬೇಕು ಮತ್ತು ಹೋರಾಡಲು ಬದುಕಬೇಕು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ(ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಕರೆ ನೀಡಿದರು.
ಸೆಂಟ್ರಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕೆನರಾ ಬ್ಯಾಂಕ್ ನೌಕರರ ಸಂಘದ(ಸಿಬಿಇಯು) ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಆಡಳಿತ ಮಂಡಳಿ, ಸರ್ಕಾರದ ನೀತಿಗಳ ವಿರುದ್ಧ ಹಿಂದಿನಿಂದಲೂ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಮುಂದೆಯೂ ಹೋರಾಟ ನಡೆಸಬೇಕಾಗಿದೆ. ವಿದೇಶಿ ಬಂಡವಾಳ ಹೂಡಿಕೆಯನ್ನು ವಿರೋಧಿಸಿದ್ದೇವೆ. ದೇಶದ ಹಿತ ಕಾಯುವುದು ಸಂಘಟನೆಯ ಧ್ಯೇಯವಾಗಿದೆ ಎಂದು ಸ್ಪಷ್ಟಪಡಿಸಿದರು.
1951ರಲ್ಲಿ ಕೆನರಾ ಬ್ಯಾಂಕ್ ನೌಕರರ ಸಂಘ ಪ್ರಾರಂಭವಾಯಿತು. ಇದಕ್ಕೂ ಮುಂಚೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೌಕರರ ಸ್ಥಿತಿ ಶೋಚನೀಯವಾಗಿತ್ತು. ಇದನ್ನು ವಿರೋಧಿಸಿದರೆ, ಪ್ರತಿಭಟನೆ ಮಾಡಿದರೆ ಅಂತಹವರನ್ನು ಸೇವೆಯಿಂದ ವಜಾ ಮಾಡಲಾಗುತ್ತಿತ್ತು. ಇದನ್ನೆಲ್ಲಾ ಮನಗಂಡು ಸಂಘ ಸ್ಥಾಪಿಸಿ ನೌಕರರ ಕ್ಷೇಮಾಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ವಿವರಿಸಿದರು.
ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಸತ್ಯನಾರಾಯಣ ರಾಜು ಮಾತನಾಡಿ, ₹17 ಸಾವಿರ ಕೋಟಿ ಠೇವಣಿ ಸಂಗ್ರಹಿಸಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಚರಿತ್ರೆ ನಿರ್ಮಾಣವಾಗಿದೆ ಎಂದರು.
ಸಿಬಿಇಯು ಅಧ್ಯಕ್ಷ ಎಂ.ಎಸ್.ಶ್ರೀನಿವಾಸನ್, ಪ್ರಧಾನ ಕಾರ್ಯದರ್ಶಿ ಬಿ.ರಾಮಪ್ರಕಾಶ್, ಮಾಜಿ ಅಧ್ಯಕ್ಷ ಎ.ಶಶಿಕಾಂತ್, ಎಐಬಿಇಎ ಜಂಟಿ ಕಾರ್ಯದರ್ಶಿಗಳಾದ ಅನಿರುದ್ಧ್ ಕುಮಾರ್, ಎಂ.ಜಯಂತ್, ಮಾಜಿ ಉಪಾಧ್ಯಕ್ಷ ಎಚ್.ವಸಂತ್ ರೈ, ಮಹಿಳಾ ಕೌನ್ಸಿಲ್ನ ರಾಷ್ಟ್ರೀಯ ಸಂಚಾಲಕಿ ರಿಚಾ ಗಾಂಧಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.