ADVERTISEMENT

ಅತಿವೃಷ್ಟಿ ವೇಳೆ ಕಾಲುವೆಗಳಿಂದ ನೀರು ಹರಿಸಿ: ಎಂ.ಬಿ.ರಾಜೇಗೌಡ ಸಲಹೆ

ಕೃಷಿ ಹವಾಮಾನ ತಜ್ಞ ಎಂ.ಬಿ.ರಾಜೇಗೌಡ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 19:03 IST
Last Updated 24 ಜುಲೈ 2021, 19:03 IST
ಎಂ.ಬಿ.ರಾಜೇಗೌಡ
ಎಂ.ಬಿ.ರಾಜೇಗೌಡ   

ಬೆಂಗಳೂರು:‘ಅತಿವೃಷ್ಟಿ ಸಂದರ್ಭದಲ್ಲಿ ಮಹಾರಾಷ್ಟ್ರದ ಅಣೆಕಟ್ಟೆಗಳಿಂದ ರಾಜ್ಯಕ್ಕೆ ಹರಿಯುವ ನೀರಿಗೆ ಹಲವು ಕಾಲುವೆಗಳನ್ನು ನಿರ್ಮಿಸಿ, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಹರಿಸಿ ಸದ್ಬಳಕೆ ಮಾಡಿಕೊಳ್ಳಬಹುದು. ಇದರಿಂದ ರಾಜ್ಯದಲ್ಲಿ ಅತಿವೃಷ್ಟಿಯನ್ನು ನಿಯಂತ್ರಿಸಬಹುದು’ ಎಂದು ಕೃಷಿ ಹವಾಮಾನ ತಜ್ಞ ಎಂ.ಬಿ.ರಾಜೇಗೌಡ ಸಲಹೆ ನೀಡಿದ್ದಾರೆ.

‘ರಾಜ್ಯದ ಗಡಿ ಪ್ರವೇಶಿಸುವಾಗಲೇಹರಿಯುವ ಮಾರ್ಗದ ಇಕ್ಕೆಲೆಗಳಲ್ಲಿ ಹತ್ತಾರು ಕಾಲುವೆಗಳನ್ನು ನಿರ್ಮಿಸಬೇಕು. ಈ ಕಾಲುವೆಗಳು ನೂರಾರು ಕೆರೆಗಳನ್ನು ಹಾದು ಹೋಗುವಂತೆ ಮಾಡಬೇಕು. ಇದರಿಂದ ಅಕ್ಕಪಕ್ಕದ ಹಳ್ಳಿಗಳಿಗೆ ಮತ್ತು ಕೃಷಿಗೂ ನೀರಿನ ಅಭಾವ ಇರುವುದಿಲ್ಲ.ಮುಖ್ಯವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೀರು ಹರಿದರೆ, ಬರಗಾಲವೂ ತಗ್ಗಲಿದೆ’ ಎಂದು ವಿವರಿಸಿದ್ದಾರೆ.

‘ಎಲ್ಲ ನದಿಗಳಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯುವ ಮೂಲಕ ಅವುಗಳನ್ನು ಪುನರುಜ್ಜೀವನಗೊಳಿಸಬೇಕು. ನೀರಿನ ಸಹಜ ಹರಿವಿಗೆ ಪೂರಕ ವ್ಯವಸ್ಥೆ ಕಲ್ಪಿಸಬೇಕು. ಕಾಲುವೆ ಕೆರೆಗಳನ್ನು ಸಂಪರ್ಕಿಸುವುದರಿಂದ ಈ ಭಾಗಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಲಿದೆ. ಕೃಷಿ ಚಟುವಟಿಕೆಗಳೂ ಗರಿಗೆದರುತ್ತವೆ. ಒಟ್ಟಾರೆ ಅತಿವೃಷ್ಟಿಯ ಅನಾಹುತಗಳನ್ನು ತಡೆಗಟ್ಟಲು ಈ ಮಾರ್ಗಗಳನ್ನು ಅನುಸರಿಸುವುದು ಸೂಕ್ತ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು’ ಎಂದೂ ಸಲಹೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.