ಬೆಂಗಳೂರು: ‘ಅಬಕಾರಿ ನಿಯಮ ಉಲ್ಲಂಘಿಸಿ ನಗರದ ಎಂ.ಜಿ. ರಸ್ತೆಯಲ್ಲಿ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಲಾಗಿದೆ’ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
‘ಎದುರಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆ, ಅಕ್ಕಪಕ್ಕದಲ್ಲಿ ಕಬ್ಬನ್ ಪಾರ್ಕ್ನ ಬಾಲಭವನ, ಚರ್ಚ್, ಉಪಪೊಲೀಸ್ ಅಧೀಕ್ಷಕರ ಕಚೇರಿ(ಕೇಂದ್ರ) ಇವೆ. ಯಾವುದೇ ಧಾರ್ಮಿಕ ಅಥವಾ ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ, ಸರ್ಕಾರಿ ಕಚೇರಿ, ವಸತಿ ಪ್ರದೇಶಗಳ 100 ಮೀಟರ್ ಅಂತರದಲ್ಲಿ ಮದ್ಯದ ಮಳಿಗೆ ತೆರೆಯಲು ಅನುಮತಿ ನೀಡುವಂತಿಲ್ಲ’ ಎಂದು ವಕೀಲ ಎ.ವಿ. ಅಮರನಾಥನ್ ಪಿಐಎಲ್ ಸಲ್ಲಿಸಿದ್ದರು.
‘ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯ ಮಧ್ಯ ಭಾಗದಿಂದ 220 ಮೀಟರ್ ಅಂತರದ ಒಳಗೆ ಇರಬಾರದು.ಕರ್ನಾಟಕ ಅಬಕಾರಿಪರವಾನಗಿ ನಿಯಮಾವಳಿ ಉಲ್ಲಂಘಿಸಿ ಪರವಾನಗಿ ನೀಡಲಾಗಿದೆ’ ಎಂದು ಅವರು ತಿಳಿಸಿದ್ದರು.
ವಿಚಾರಣೆ ವೇಳೆಹೈಕೋರ್ಟ್ ನೀಡಿದ ನಿರ್ದೇಶನದಂತೆ ತಹಶೀಲ್ದಾರ್ ಸರ್ವೆ ನಡೆಸಿ ಹೈಕೊರ್ಟ್ಗೆ ವರದಿ ಸಲ್ಲಿಸಿದ್ದರು. ಅದರ ಪ್ರಕಾರ ಚರ್ಚ್, ಡಿಸಿಪಿ ಕಚೇರಿ 100 ಮೀಟರ್ ಅಂತರದೊಳಗೆ ಇಲ್ಲ. ಈ ಕಾರಣದಿಂದ ಪಿಐಎಲ್ ಅನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.