ಬೆಂಗಳೂರು: ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರು ಕಲಾಪವನ್ನು ತಪ್ಪಿಸಿಕೊಳ್ಳುವಂತಿಲ್ಲ ಎಂದು ವಿಧಾನ ಸಭಾಧ್ಯಕ್ಷ ರಮೇಶಕುಮಾರ್ ಮೇಲಿಂದ ಮೇಲೆ ಎಚ್ಚರಿಕೆ ನೀಡಿದರೂ ಗೈರಾಗುವ ಚಾಳಿ ಶುಕ್ರವಾರವೂ ಮುಂದುವರಿಯಿತು.
ಕಾಗದ ಪತ್ರಗಳನ್ನು ಮಂಡಿಸಬೇಕಿದ್ದ ಮೂವರು ಸಚಿವರು ಗೈರು ಹಾಜರಾಗಿದ್ದರು. ಅವರ ಪರವಾಗಿ ಕಾನೂನು ಸಚಿವ ಕೃಷ್ಣ ಬೈರೇಗೌಡ ಆ ಹೊಣೆಯನ್ನು ನಿಭಾಯಿಸಿದರು. ಆಗ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸದಸ್ಯರ ಪಟ್ಟಿ ನೋಡಿದ ಸಭಾಧ್ಯಕ್ಷರು, ‘ಸಚಿವರಾದ ಜಿ.ಟಿ.ದೇವೇಗೌಡ, ಡಿ.ಸಿ.ತಮ್ಮಣ್ಣ ಹಾಗೂ ಯು.ಟಿ.ಖಾದರ್ ಎಲ್ಲಿ’ ಎಂದು ಪ್ರಶ್ನಿಸಿದರು.
‘ಸರ್, ಅವರನ್ನೆಲ್ಲಾ ಸಭೆಗೆ ಕರೆಸುತ್ತೇವೆ’ ಎಂದು ಕಾನೂನು ಸಚಿವರು ಉತ್ತರಿಸಿದರು. ‘ಇನ್ನುಮುಂದೆ ಈ ರೀತಿ ಗೈರಾದರೆ ಅಂಥವರ ವಿರುದ್ಧ ಕ್ರಮ ಜರುಗಿಸುತ್ತೇನೆ. ತಕ್ಷಣ ಸಚಿವರನ್ನು ಕರೆಸಿ’ ಎಂದು ಸಭಾಧ್ಯಕ್ಷರು ತಾಕೀತು ಮಾಡಿದರು. ಕೆಲವೇ ಕ್ಷಣಗಳಲ್ಲಿ ಮೂವರೂ ಸಚಿವರು ಪ್ರತ್ಯಕ್ಷವಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.