ADVERTISEMENT

ತಂದೆಯ ಬೈಕ್‌ನಲ್ಲಿ ಸುತ್ತಾಡಿ ಸುಲಿಗೆ ಆರೋಪ: ಬಂಧನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 20:19 IST
Last Updated 8 ಜುಲೈ 2019, 20:19 IST

ಬೆಂಗಳೂರು: ತಂದೆಯ ಬೈಕ್‌ನಲ್ಲಿ ಸುತ್ತಾಡಿ ಸುಲಿಗೆ ಮಾಡುತ್ತಿದ್ದ ಆರೋಪದಡಿ ಸಾಯಿಕೃಷ್ಣ ಹಾಗೂ ಆತನ ಸ್ನೇಹಿತರಾದ ರಾಜಶೇಖರ್ ಗಾಂಡ್ಲಪರ್ತಿ, ಮುನಿಯಪ್ಪ ಎಂಬುವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

‘ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರನ್ನು ಅಡ್ಡಗಟ್ಟಿ ಕೃತ್ಯ ಎಸಗುತ್ತಿದ್ದ ಆರೋಪಿಗಳು, ಮೊಬೈಲ್ ಹಾಗೂ ನಗದು ಕಸಿದುಕೊಂಡು ಪರಾರಿಯಾಗುತ್ತಿದ್ದರು. ಅವರಿಂದ 6 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಗಾರೆ ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು, ದುಶ್ಚಟಗಳ ದಾಸರಾಗಿದ್ದರು. ದುಡಿದ ಹಣ ಅವರ ಖರ್ಚಿಗೆ
ಸಾಕಾಗುತ್ತಿರಲಿಲ್ಲ. ಹೀಗಾಗಿಯೇ ಅವರು ಗ್ಯಾಂಗ್‌ ಕಟ್ಟಿಕೊಂಡು ಸುಲಿಗೆ ಮಾಡಲು ಆರಂಭಿಸಿದ್ದರು. ದೋಚಿದ್ದ ಮೊಬೈಲ್‌ಗಳನ್ನು
ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ದುಶ್ಚಟಗಳಿಗೆ ಖರ್ಚು ಮಾಡುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು. ಪ್ರಕರಣ ದಾಖಲಾಗಿದೆ.

ADVERTISEMENT

‘ಎಲ್‌ ಆ್ಯಂಡ್ ಟಿ’ ನೌಕರನ ಮೇಲೆ ಹಲ್ಲೆ: ‘ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ನಡೆದುಕೊಂಡು ಹೊರಟಿದ್ದ ‘ಎಲ್‌ ಆ್ಯಂಡ್ ಟಿ’ ಕಂಪನಿ ನೌಕರ ರಂಜಿತ್ ಅವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ಚಾಕುವಿನಿಂದ ಹಲ್ಲೆ ಮಾಡಿದ್ದರು. ಆ ಸಂಬಂಧ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು, ನಗರದ ಹಲವೆಡೆ ಸುಲಿಗೆ ಮಾಡಿರುವ ಸಂಗತಿ ವಿಚಾರಣೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.