ADVERTISEMENT

ಕೆಲಸದಿಂದ ತೆಗೆದಿದ್ದಕ್ಕೆ ವ್ಯವಸ್ಥಾಪಕನ ಕೊಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 19:31 IST
Last Updated 25 ಮಾರ್ಚ್ 2022, 19:31 IST

ಬೆಂಗಳೂರು: ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ರಾಜಶೇಖರ್ ಅವರ ಕೊಲೆಗೆ ಯತ್ನಿಸಿದ್ದ ಆರೋಪದಡಿ ಡಿ. ಮಧು (30) ಎಂಬುವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

‘ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸಾದಹಳ್ಳಿಯ ಮಧು, ಸಹಚರರ ಜೊತೆ ಸೇರಿ ಕೃತ್ಯ ಎಸಗಿದ್ದರು. ರಾಜಶೇಖರ್ ನೀಡಿರುವ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರಾಜರಾಜೇಶ್ವರಿನಗರದ ರಾಜಶೇಖರ್, ಮಾರ್ಚ್ 8ರಂದು ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ಹೊರಟಿದ್ದರು. ಬಿ.ಕೆ.ಪಾಳ್ಯದಲ್ಲಿ ಕಾರು ಅಡ್ಡಗಟ್ಟಿದ್ದ ಆರೋಪಿಗಳು, ಮಾರಕಾಸ್ತ್ರ ಹಿಡಿದು ಹಲ್ಲೆಗೆ ಯತ್ನಿಸಿದ್ದರು. ಕಾರಿನ ಗಾಜು ಹೊಡೆದಿದ್ದರು. ರಾಜಶೇಖರ್, ಅಲ್ಲಿಂದ ತಪ್ಪಿಸಿಕೊಂಡಿದ್ದರು’ ಎಂದೂ ತಿಳಿಸಿದರು.

ADVERTISEMENT

‘ರಾಜಶೇಖರ್ ಅವರ ಕಂಪನಿಯಲ್ಲಿ ಆರೋಪಿ ಮಧು ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಅವರನ್ನು ಕೆಲಸದಿಂದ ತೆಗೆಯಲಾಗಿತ್ತು. ಇದರಿಂದ ಸಿಟ್ಟಾಗಿದ್ದ ಮಧು, ರಾಜಶೇಖರ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಇದಕ್ಕೆ ಆರೋಪಿಗಳಾದ ಪ್ರಮೋದ್, ಡಿ. ಅಲೆಕ್ಸಾಂಡರ್, ಟಿ. ಚಿನ್ನರಾಜು ಹಾಗೂ ಇಮ್ರಾನ್ ಪಾಷಾ ಎಂಬುವರ ಸಹಾಯ ಪಡೆದಿದ್ದರು. ಅವರೆಲ್ಲ ಸದ್ಯ ತಲೆಮರೆಸಿಕೊಂಡಿದ್ದಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.