ಬೆಂಗಳೂರು: ಕಲಾಸಿಪಾಳ್ಯ ಬಳಿಯ ನ್ಯೂ ಎಕ್ಸ್ಟೆನ್ಶನ್ ರಸ್ತೆಯಲ್ಲಿ ಐವರು ದುಷ್ಕರ್ಮಿಗಳು, ಆಟೊ ಚಾಲಕ ಆನಂದ್ (32) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
‘ಜೆ.ಸಿ. ರಸ್ತೆಯ ಸಿಮೆಂಟ್ ಕಾಲೊನಿ ನಿವಾಸಿ ಆಗಿದ್ದ ಆನಂದ್, ತಮ್ಮ ಎಂಟು ವರ್ಷದ ಮಗ ಹಾಗೂ ಸ್ನೇಹಿತನ ಜೊತೆ ರಸ್ತೆಯಲ್ಲಿ ನಿಂತುಕೊಂಡಿದ್ದರು. ಅವರೊಂದಿಗೆ ಜಗಳ ತೆಗೆದಿದ್ದ ಆರೋಪಿಗಳು, ಮಗನ ಎದುರೇ ಕೊಲೆ ಮಾಡಿದ್ದಾರೆ’ ಎಂದು ಕಲಾಸಿಪಾಳ್ಯ ಪೊಲೀಸರು ಹೇಳಿದರು.
ಬೈಕ್ ತಾಗಿದ್ದಕ್ಕೆ ಶುರುವಾದ ಜಗಳ: ‘ಆಟೊ ಚಲಾಯಿಸಿಕೊಂಡು ಜೀವನ ಸಾಗಿಸುತ್ತಿದ್ದ ಆನಂದ್, ನಿತ್ಯವೂ ರಸ್ತೆ ಪಕ್ಕದಲ್ಲಿ ಆಟೊ ನಿಲ್ಲಿಸಿಕೊಂಡು ಮಲಗುತ್ತಿದ್ದರು. ಆಗಾಗ ಮಗನನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಬುಧವಾರ ರಾತ್ರಿ 11ರ ಸುಮಾರಿಗೆ ಮನೆಯಲ್ಲಿ ಊಟ ಮಾಡಿದ್ದ ಆನಂದ್, ಮಗನನ್ನು ಆಟೊದಲ್ಲಿ ಹತ್ತಿಸಿಕೊಂಡು ನ್ಯೂ ಎಕ್ಸ್ಟೆನ್ಶನ್ ರಸ್ತೆಗೆ ಬಂದಿದ್ದರು. ಸ್ನೇಹಿತ ಸಹ ಅವರೊಂದಿಗೆ ಇದ್ದರು. ರಸ್ತೆ ಪಕ್ಕದಲ್ಲಿ ಆಟೊ ನಿಲ್ಲಿಸಿ, ಮೊಬೈಲ್ನಲ್ಲಿ ಮಾತನಾಡುತ್ತ ರಸ್ತೆಯ ಇನ್ನೊಂದು ಬದಿಗೆ ಹೋಗಿದ್ದರು. ಅದೇ ರಸ್ತೆಯಲ್ಲೇ ಹೊರಟಿದ್ದ ಯುವಕರಿಬ್ಬರಿದ್ದ ಬೈಕ್ ಆನಂದ್ ಅವರಿಗೆ ತಾಗಿತ್ತು.’
‘ಕೋಪಗೊಂಡ ಆನಂದ್, ಯುವಕರನ್ನು ತಡೆದು ಪ್ರಶ್ನಿಸಿದ್ದರು. ಒಬ್ಬಾತನ ಕಪಾಳಕ್ಕೂ ಹೊಡೆದಿದ್ದರು. ಅಲ್ಲಿಂದ ಹೊರಟು ಹೋಗಿದ್ದ ಯುವಕರು, ಕೆಲ ನಿಮಿಷಗಳ ನಂತರ ತಮ್ಮ ಸ್ನೇಹಿತರನ್ನು ಕರೆದುಕೊಂಡು ಬಂದು ಆನಂದ್ ಜೊತೆ ಜಗಳ ತೆಗೆದು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಈ ಬಗ್ಗೆ ಆನಂದ್ ಅವರ ಸ್ನೇಹಿತನಿಂದ ಹೇಳಿಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.