ಬೆಂಗಳೂರು: ರಾಗಿಯಿಂದ ತಯಾರಿಸಿದ ಚಿಕ್ಕಿ, ಮೊಳಕೆ ಹಿಟ್ಟು, ಪಾಪಡ್, ಬೆಟ್ಟದ ನೆಲ್ಲಿಯಿಂದ ಮಾಡಿದ ಪಾನೀಯ, ಪುಡಿ, ಹಲಸಿನ ಚಾಕೊಲೇಟ್, ಮಜ್ಜಿಗೆ ಮೆಣಸು, ಕೆಂಪು ಅವಲಕ್ಕಿ... ಈ ಎಲ್ಲ ಗ್ರಾಮೀಣ ಸೊಗಡಿನ ಪದಾರ್ಥಗಳು ನಗರದ ಜನರ ಬಾಯಲ್ಲಿ ನೀರೂರಿಸಿದವು.
ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ವತಿಯಿಂದ ನಗರದ ಗರುಡಾ ಮಾಲ್ ಅಂಗಳದಲ್ಲಿ ನಡೆಯುತ್ತಿರುವ ‘ನಬಾರ್ಡ್ ಗ್ರಾಮೀಣ ಹಬ್ಬ’ದಲ್ಲಿ ಶುಕ್ರವಾರ ಕಂಡುಬಂದ ದೃಶ್ಯಗಳಿವು.
ಇದೇ 22ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಗ್ರಾಮೀಣ ಕಲಾಕೃತಿಗಳ ಹಾಗೂ ಕರಕುಶಲಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಶಾಸಕ ಉದಯ ಬಿ.ಗರುಡಾಚಾರ್ ಉದ್ಘಾಟಿಸಿದರು.
ಮಿಜೋರಾಂನ ವಸ್ತ್ರಗಳು, ಬೀದರ್ ಖ್ಯಾತಿಯ ಬಿದರಿ ಕಲೆ ವಸ್ತುಗಳು, ಒಡಿಶಾದ ಪಟ್ಟ ಚಿತ್ರ, ಸುಪಾರಿ ಕಲಾಕೃತಿಗಳು, ಮಧ್ಯಪ್ರದೇಶದ ಚೂಡಿಯಾ ವಸ್ತ್ರಗಳು, ಮೈಸೂರಿನ ಅಗರಬತ್ತಿ, ಮೊಣಕಾಲ್ಮುರು ಸೀರೆ, ತಮಿಳುನಾಡಿನ ವಿಶೇಷ ಸೀರೆಗಳು. ಮತ್ತೊಂದೆಡೆ ಮಲೆನಾಡಿನ ಮಜ್ಜಿಗೆ ಮಣಸಿನಕಾಯಿ, ಬಾಳೆ ಹಣ್ಣಿನ ಹಲ್ವ, ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿ, ಚಟ್ನಿ ಪುಡಿ ಮುಂತಾದ ಖಾದ್ಯಗಳು ಆಹಾರ ಪ್ರಿಯರನ್ನು ಕೈಬೀಸಿ ಕರೆಯುತ್ತಿದ್ದವು.
ನಬಾರ್ಡ್ನ ಪ್ರಧಾನ ವ್ಯವಸ್ಥಾಪಕ ಕೆ.ಯು.ವಿಶ್ವನಾಥನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.