ರಾಜರಾಜೇಶ್ವರಿನಗರ: ಬಿರುಕು ಬಿಟ್ಟ ಗೋಡೆ, ಒಡೆದ ಕಿಟಕಿಯ ಗಾಜುಗಳು, ಬಾಗಿಲುಗಳಿಲ್ಲದ ಶೌಚಾಲಯ... ಇದು ನಾಗರಬಾವಿ ನಾಡಕಚೇರಿಯ ದುಃಸ್ಥಿತಿ.
ಪಾಲಿಕೆ ಕಟ್ಟಡದ ಒಂದು ಭಾಗದಲ್ಲಿ ಅಟಲ್ ಜನ ಸ್ನೇಹಿ ಕೇಂದ್ರ ಇದೆ. ಇದರ ಗೋಡೆಗಳು ಬಿರುಕು ಬಿಟ್ಟಿದ್ದು, ಕಿಟಕಿಗಳನ್ನು ರಟ್ಟು ಮತ್ತು ಪ್ಲಾಸ್ಟಿಕ್ ಶೀಟ್ಗಳಿಂದ ಮುಚ್ಚಲಾಗಿದೆ.
ಮತ್ತೊಂದು ಭಾಗದಲ್ಲಿ ನಾಡಕಚೇರಿಯ ಸಹಾಯಕೇಂದ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ವಿತರಿಸುವ ವಿಭಾಗ ಇದೆ. ಇಲ್ಲಿನ ದೊಡ್ಡ ಕಿಟಕಿಗೆ ಬಟ್ಟೆ ಪರದೆ ಕಟ್ಟಿಕೊಂಡು ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಕಟ್ಟಡದೊಳಗೆ ಶೌಚಾಲಯವಿದ್ದು, ಬಾಗಿಲುಗಳು ಹಾಳಾಗಿ ವರ್ಷಗಳೇ ಕಳೆದಿವೆ. ಮೂತ್ರ ವಿಸರ್ಜನೆಗೆ ಸಿಬ್ಬಂದಿ ಬಯಲು ಪ್ರದೇಶ ಹುಡುಕಿಕೊಂಡು ಹೋಗುವಂತಗಾಗಿದೆ.
ಟಿ.ದಾಸರಹಳ್ಳಿ, ದೊಡ್ಡಬಿದರಕಲ್ಲು, ಪೀಣ್ಯ ಕೈಗಾರಿಕಾ ಪ್ರದೇಶ, ಹೆಗ್ಗನಹಳ್ಳಿ, ರಾಜಗೋಪಾಲನಗರ, ಜ್ಞಾನಭಾರತಿ, ಕೊಟ್ಟಿಗೆಪಾಳ್ಯ, ಕಾವೇರಿಪುರ, ಉಲ್ಲಾಳು, ಹೇರೋಹಳ್ಳಿ, ನಾಗಸಂದ್ರ, ಲಕ್ಷ್ಮಿದೇವಿನಗರ, ಲಗ್ಗೆರೆ, ವೃಷಭಾವತಿಪುರ, ಕಮಲಾನಗರ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಚಂದ್ರಾ ಲೇಔಟ್, ಕೊಡಿಗೇಹಳ್ಳಿ, ರಾಮಸಂದ್ರ ಹಾಗೂ ಇತರ ಬಡಾವಣೆ ನಿವಾಸಿಗಳು ಜಾತಿ, ಆದಾಯ ಪ್ರಮಾಣ ಪತ್ರ, ವೃದಾಪ್ಯ ವೇತನ, ಅಂಗವಿಕಲ ಪ್ರಮಾಣಪತ್ರ, ವಿಧವಾ ಪ್ರಮಾಣಪತ್ರಕ್ಕಾಗಿ ಇದೇ ಕಚೇರಿಗೆ ಬರಬೇಕು.
‘ಪ್ರಮಾಣ ಪತ್ರಗಳನ್ನು ಪಡೆಯಲು ಸಾಲುಗಟ್ಟಿ ನಿಲ್ಲುವ ಜನ ಶೌಚಾಲಯ ಹುಡುಕಲು ಪರದಾಡುತ್ತಾರೆ. ಸಾಲಿನಲ್ಲಿ ನಿಲ್ಲುವ ನೆಲಹಾಸಿನ ಸ್ಲಾಬ್ಗಳು ಒಡೆದು ಹೋಗಿದ್ದು, ಇಲಿ, ಹೆಗ್ಗಣಗಳ ವಾಸಸ್ಥಾನವಾಗಿವೆ’ ಎಂದು ಸಾರ್ವಜನಿಕರು ದೂರಿದ್ದಾರೆ.
‘ಈ ಅವ್ಯವಸ್ಥೆ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.