ADVERTISEMENT

ಮೆಟ್ರೊಗೆ ಚರ್ಚ್‌ ಜಾಗ: ವಿರೋಧ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 20:38 IST
Last Updated 4 ಜುಲೈ 2019, 20:38 IST
   

ಬೆಂಗಳೂರು: ವೆಲ್ಲಾರ ಜಂಕ್ಷನ್‌ ಬಳಿ ‘ನಮ್ಮ ಮೆಟ್ರೊ’ಗಾಗಿ ಆಲ್‌ ಸೇಂಟ್ಸ್‌ ಚರ್ಚ್‌ಒಳಗೆ ಸುರಂಗ ಕೊರೆಯಲು ಮುಂದಾಗಿರುವ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ನಿರ್ಧಾರಕ್ಕೆ ಆಲ್‌ ಸೇಂಟ್ಸ್‌ ಚರ್ಚ್‌ ಸಭೆ ಕಲ್ಯಾಣ ಸಂಸ್ಥೆ ವಿರೋಧ ವ್ಯಕ್ತಪಡಿಸಿದೆ.

‘ಮೆಟ್ರೊ ಮಾರ್ಗಕ್ಕಾಗಿ 150 ವರ್ಷ ಇತಿಹಾಸವಿರುವ ಚರ್ಚ್‌ ಧ್ವಂಸಗೊಳಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಬೆಂಗಳೂರಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಹೆಗ್ಗುರುತಿನಂತಿರುವ ಚರ್ಚ್‌ ಅನ್ನು ನಾಶಗೊಳಿಸುವುದು ಸರಿಯಲ್ಲ’ ಎಂದು ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.

‘ಚರ್ಚ್‌ನ ಆವರಣದಲ್ಲಿ ನೂರಾರು ಮರಗಳಿವೆ. ನಿತ್ಯ ನೂರಾರು ಪಕ್ಷಿಪ್ರಿಯರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.ನಗರದೊಳಗೆ ಇಂತಹ ವಾತಾವರಣ ಇರುವುದು ಅಪರೂಪ. ರಾಜ್ಯ ಸರ್ಕಾರ, ಬಿಬಿಎಂಪಿ, ರಾಜ್ಯ ಜೀವವೈವಿಧ್ಯ ಮಂಡಳಿ ಮುಂತಾದವು ಚರ್ಚ್‌ನ ಇಂತಹ ಪರಿಸರ ಪ್ರೇಮವನ್ನು ಶ್ಲಾಘಿಸಬೇಕು ಮತ್ತು ಇಂತಹ ಸ್ಥಳದ ರಕ್ಷಣೆಗೆ ಸಹಕಾರ ನೀಡಲು ಮುಂದಾಗಬೇಕು’ ಎಂದು ಅದು ಒತ್ತಾಯಿಸಿದೆ.

ADVERTISEMENT

‘ಮೆಟ್ರೊಗಾಗಿ ಮಾರ್ಗ ಕಾರಣ ಚರ್ಚ್‌ನ ಒಳಗಿಂದ ಸುರಂಗ ಕೊರೆಯುವ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಹಲವು ಬಾರಿ ಮನವಿ ಮಾಡಿದ್ದರೂ, ಬಿಎಂಆರ್‌ಸಿಎಲ್‌ ಚರ್ಚ್‌ ಒಳಗಡೆಯೇ ಜಾಗ ಬೇಕು ಎಂದು ಹಟ ಹಿಡಿದಿದೆ. ಈಗಾಗಲೇ, ಚರ್ಚ್ ಬಳಿಯಲ್ಲಿ 3600 ಚದರ ಮೀಟರ್‌ ಭೂಮಿಯನ್ನು ನೀಡಿದ್ದೇವೆ. ಈಗ ಚರ್ಚ್‌ ಒಳಗಿನ 4 ಸಾವಿರ ಚದರ ಮೀಟರ್ ಜಾಗ ಬೇಕು ಎನ್ನುತ್ತಿದ್ದಾರೆ. ಇದರಿಂದ ನೂರಾರು ಮರಗಳನ್ನು ನಾಶ ಮಾಡಬೇಕಾಗುತ್ತದೆ. ಪರ್ಯಾಯ ಮಾರ್ಗಗಳಿದ್ದರೂ ಇದೇ ಜಾಗ ಬೇಕು ಎಂದು ಕೇಳುವುದು ಸರಿಯಲ್ಲ’ ಎಂದು ಸಂಸ್ಥೆ ಹೇಳಿದೆ.

‘ನಮ್ಮ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಚರ್ಚ್‌ ಅಡ್ಡಿಪಡಿಸುತ್ತಿದೆ’ ಎಂದು ಬಿಎಂಆರ್‌ಸಿಎಲ್‌ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.