ಬೆಂಗಳೂರು: ಈ ಭಾಗದ ಸುತ್ತಮುತ್ತ ಪ್ರದೇಶಗಳ ಜನತೆಗೆ ಕುಡಿಯಲು, ಜನ ಜಾನುವಾರುಗಳಿಗೆ ಆಸರೆಯಾಗಿದ್ದ ನರಸೀಪುರ ಕೆರೆಯಲ್ಲೀಗ ನೀರಿಲ್ಲ. ಬೇಸಿಗೆಗೂ ಮುನ್ನವೇ ಇದರಲ್ಲಿ ನೀರಿನ ಕೊರತೆ ಎದ್ದು ಕಾಣಿಸುತ್ತಿದೆ. ಅಲ್ಪ ಪ್ರಮಾಣದ ನೀರಿಗೂ ಒಳಚರಂಡಿ ನೀರು ಸೇರಿ ಕಲುಷಿತಗೊಳ್ಳುತ್ತಿದೆ.
ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿರುವ ಈ ಕೆರೆಯನ್ನು ಬಿಬಿಎಂಪಿ ಅಭಿವೃದ್ಧಿಪಡಿಸುತ್ತಿದೆ.
‘ಎಂ.ಎಸ್.ಪಾಳ್ಯದ ಕೊಳಚೆ ನೀರು ನೇರವಾಗಿ ರಾಜಕಾಲುವೆಗೆ ಹರಿಯಲು ಕೆರೆಯಲ್ಲಿಯೇ ಪೈಪ್ಲೈನ್ ವ್ಯವಸ್ಥೆ ಕಲ್ಪಿಸಿದ್ದಾರೆ. ಆದರೆ, ಅಳವಡಿಸಿರುವ ಕೊಳವೆಯ ಅಗಲ ಬಹಳ ಕಿರಿದಾಗಿದ್ದು, ಹರಿಯುವ ಕೊಳಚೆ ನೀರಿನ ಪ್ರಮಾಣ ಹೆಚ್ಚು ಇದೆ. ಹಾಗಾಗಿ ಕೊಳೆ ನೀರು ಕೆರೆಯ ಒಡಲಿಗೆ ನುಗ್ಗುತ್ತದೆ’ ಎಂದು ಸ್ಥಳೀಯ ನಿವಾಸಿ ಎಚ್.ಗೋಪಾಲಕೃಷ್ಣ ದೂರಿದರು.
‘ತಂತಿ ಬೇಲಿ ಎರಡು ಕಡೆ ಕಿತ್ತು ಹೋಗಿದೆ. ಇಲ್ಲಿ ಬೀದಿನಾಯಿಗಳ ಒಳನುಗ್ಗಿ ಬರುವುದರಿಂದ ವಾಯುವಿಹಾರಿಗಳಿಗೆ ತೊಂದರೆ ಉಂಟಾಗಿದೆ. ಇದರ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಿಲ್ಲ’ ಎಂದು ಹೇಳಿದರು.
‘ಕೆರೆಯ ಅಂಗಳದ ನಡಿಗೆ ಪಥದ ಎರಡೂ ಬದಿ ಸ್ಲ್ಯಾಬ್ಗಳನ್ನು ಅಳವಡಿಸುವ ಕೆಲಸ ಅರ್ಧಕ್ಕೆ ಸ್ಥಗಿತಗೊಂಡಿದೆ. ಪಥದ ಎರಡು ಬದಿಯಲ್ಲಿ ಬಿದಿರು ಎತ್ತರಕ್ಕೆ ಬೆಳೆದಿದೆ. ಇಲ್ಲಿರುವ ಬಿದಿರು ಒಣಗಿದೆ. ನೆಲ ಮಟ್ಟದವರೆಗೂ ಬಾಗಿದ್ದು ಬೀಳುವ ಹಂತದಲ್ಲಿದೆ. ಇದರಿಂದ ವಾಯುವಿಹಾರಿಗಳು ನಡೆದಾಡಲು ತೊಂದರೆ ಆಗುತ್ತಿದೆ. ಅಲ್ಲಲ್ಲಿ ಬಿದ್ದಿರುವ ಬಿದಿರುಗಳನ್ನೂ ತೆರವುಗೊಳಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.