ಬೆಂಗಳೂರು: ‘ಜನ್ಮಜಾತ ಹೃದಯ ಕಾಯಿಲೆ ಮಕ್ಕಳಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ.ಈ ಕಾಯಿಲೆಗೆ ಚಿಕಿತ್ಸೆ ನೀಡಬಹುದಾದರೂ ಶೇ 20ರಷ್ಟು ಮಕ್ಕಳು ತಮ್ಮ ಮೊದಲ ಜನ್ಮದಿನ ಆಚರಿಸುವ ಮೊದಲೇ ಆರ್ಥಿಕ ಸಂಕಷ್ಟದಿಂದ ಸಾಯುತ್ತಾರೆ’ ಎಂದು ನಾರಾಯಣ ಹೆಲ್ತ್ನ ಸಂಸ್ಥಾಪನಾಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.
ಮಕ್ಕಳ ಶಸ್ತ್ರಚಿಕಿತ್ಸೆಗೆಂದು ಸೆಂಟಮ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಆಸ್ಪತ್ರೆಗೆ ₹ 50 ಲಕ್ಷ ದೇಣಿಗೆ ನೀಡಿದೆ.125 ಮಕ್ಕಳಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆ ನೆರವೇರಿಸಿದೆ. ‘ದೇಶದಲ್ಲಿ 2.4 ಲಕ್ಷಕ್ಕೂ ಹೆಚ್ಚು ಮಕ್ಕಳು ಹೃದಯ ರಂಧ್ರದೊಂದಿಗೆ ಜನಿಸುತ್ತಾರೆ. ಜನ್ಮಜಾತ ಹೃದಯ ಕಾಯಿಲೆಯು ಮರಣಕ್ಕೆ ಕಾರಣವಾಗಿದೆ. ಆದ್ದರಿಂದ ಮಕ್ಕಳಲ್ಲಿನ ಹೃದಯ ಸಮಸ್ಯೆ ಗುರುತಿಸಿ, ಚಿಕಿತ್ಸೆ ಒದಗಿಸಬೇಕು. ಚಿಕಿತ್ಸಾ ವೆಚ್ಚ ದುಬಾರಿ ಇರುವುದರಿಂದ ಎಲ್ಲರಿಗೂ ಈ ಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗುತ್ತಿಲ್ಲ.ಆರ್ಥಿಕ ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಲು ದಾನಿಗಳು ಮುಂದೆ ಬರಬೇಕು’ ಎಂದು ಹೇಳಿದರು.
ಸೆಂಟಮ್ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಅಪ್ಪಾರಾವ್ ಮಲ್ಲವರಪು ‘ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ದೊರೆಯಬೇಕು.ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್) ಅಡಿ ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸಲಾಗುತ್ತಿದೆ. ಸಮಸ್ಯೆ ಎದುರಿಸುತ್ತಿರುವಮಕ್ಕಳು ಮತ್ತು ಅವರ ಕುಟುಂಬದ ಸದಸ್ಯರ ಮುಖದಲ್ಲಿ ನಗು ತರಿಸುವ ಕಾರ್ಯ ಸಂತಸ ನೀಡಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.