ಬೆಂಗಳೂರು: ‘ಮಾದಕ ವಸ್ತುಗಳ ತಯಾರಿಕೆ, ಹಂಚಿಕೆ ಮತ್ತು ಬಳಕೆಯಂತಹ ಕೆಲಸದಲ್ಲಿ ತೊಡಗುವುದು ಎನ್ಡಿಪಿಎಸ್ಗೆ (ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ) ವಿರುದ್ಧವಾದುದು. ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ ಹೇಳಿದರು.
ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕವು, ‘ಮಾದಕ ವಸ್ತುಗಳ ದುರುಪಯೋಗ ಹಾಗೂ ತಡೆಗಟ್ಟುವಿಕೆ’ ಕುರಿತು ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಶಾಲಾ-ಕಾಲೇಜುಗಳ ಆವರಣದಲ್ಲಿ ಡ್ರಗ್ಸ್ ಚಟುವಟಿಕೆಗಳು ನಡೆಯದ ಹಾಗೆ ಕ್ರಮವಹಿಸಬೇಕು. ನಮ್ಮ ವಿಶ್ವವಿದ್ಯಾಲಯವನ್ನು ಮಾದಕವಸ್ತು ರಹಿತ ಆವರಣ ಎಂದು ಘೋಷಿಸಲಾಗಿದೆ’ ಎಂದು ತಿಳಿಸಿದರು.
ಜೆಎನ್ಯು ಪ್ರಾಧ್ಯಾಪಕ ಪುನೀತ್, ‘ಎನ್ಡಿಪಿಎಸ್ ಕಾಯ್ದೆ ಉಲ್ಲಂಘಿಸಿದವರಿಗೆ ಜೀವಾವಧಿ ಜೈಲು ಶಿಕ್ಷೆ, ಮರಣದಂಡನೆ ವಿಧಿಸುವ ಅವಕಾಶವೂ ಕಾನೂನಿನಲ್ಲಿದೆ’ ಎಂದು ವಿವರಿಸಿದರು.
ವೈದ್ಯ ಡಾ. ಅಂಜನಪ್ಪ, ‘ಮಾದಕ ವಸ್ತುಗಳ ಸೇವನೆ, ಎಲ್ಲಾ ರೋಗಗಳನ್ನು ಆಹ್ವಾನಿಸಿಕೊಂಡಂತೆ. ಅದು ಖಿನ್ನತೆಗೆ ದೂಡುತ್ತದೆ’ ಎಂದರು.
ಡಾ. ಸುರೇಶ್, ‘15ರಿಂದ 24 ವರ್ಷದ ಯುವಕರು ಹೆಚ್ಚಾಗಿ ಈ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.