ಬೊಮ್ಮನಹಳ್ಳಿ: ‘ನಗರದ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದ ರಿಯಲ್ ಎಸ್ಟೇಟ್ ಉದ್ದಿಮೆ, ನೋಟು ರದ್ದತಿಯಿಂದಾಗಿ ಕುಂಠಿತಗೊಂಡಿದೆ’ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅಭಿಪ್ರಾಯಪಟ್ಟರು.
ಬಿಲ್ಡರ್ಸ್ ಅಸೋಷಿಯೇಷನ್ ಕೋರಮಂಗಲದಲ್ಲಿ ಆಯೋಜಿಸಿದ್ದ ‘ಬಿಲ್ಡರ್ಸ್ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು.
‘ನೋಟು ರದ್ದತಿಯಿಂದ ಕಪ್ಪುಹಣಕ್ಕೆ ಕಡಿವಾಣ ಹಾಕಲಾಗಿದೆ. ಆದರೆ, ಕಾನೂನಿನ ಬಿಗಿಹಿಡಿತದಿಂದಾಗಿ ಬಿಲ್ಡರ್ಗಳಿಗೆ ತೊಂದರೆಯಾಗಿರುವುದು ನಿಜ. ಕಾನೂನನ್ನು ಸಡಿಲಗೊಳಿಸಬೇಕಾದ ಅಗತ್ಯವಿದೆ. ಜನರ ಬಳಿ ಹಣ ಇದ್ದರೂ ಖರ್ಚು ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಇದರಿಂದ ನಗರದ ಸಾವಿರಾರು ಅಪಾರ್ಟ್ಮೆಂಟ್ ಸಮುಚ್ಚಯಗಳು ಖಾಲಿ ಬಿದ್ದಿವೆ’ ಎಂದರು.
‘ಬಿಲ್ಡರ್ಗಳು ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಸದ್ಯದಲ್ಲೇ ಮುಖ್ಯಮಂತ್ರಿ ಬಳಿಗೆ ನಿಯೋಗ ಕರೆದುಕೊಂಡು ಹೋಗಲಾಗುವುದು’ ಎಂದರು.
‘ನಗರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ನವ ನಗರೋತ್ಥಾನ ಯೋಜನೆಯಡಿ ₹8,500 ಕೋಟಿ ನೀಡಿದೆ. ರಸ್ತೆ, ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ’ ಎಂದರು. ಬಿಎಐ ಅಧ್ಯಕ್ಷ ಎಸ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಜೀವಮಾನ ಸಾಧನೆಗಾಗಿ ಹಿರಿಯ ಎಂಜಿನಿಯರ್ ಕೆ.ಅಪ್ಪಿರೆಡ್ಡಿ ಅವರಿಗೆ ‘ವಿಶ್ವೇಶ್ವರಯ್ಯ ನೆನಪಿನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.