ಅಂಗಾಂಗ ದಾನ
ಸಂಗ್ರಹ ಚಿತ್ರ
ಬೆಂಗಳೂರು: ಮಿದುಳು ಸಂಬಂಧಿ ಸಮಸ್ಯೆಯಿಂದಾಗಿ ಮೃತಪಟ್ಟ ಯುವಕನೊಬ್ಬ, ಅಂಗಾಂಗ ದಾನಗಳ ಮೂಲಕ ಏಳು ಮಂದಿಗೆ ನೆರವಾಗಿದ್ದಾರೆ.
32 ವರ್ಷದ ಕಿರಣ್ ಕುಮಾರ್ ಅಂಗಾಂಗ ದಾನಿಯಾಗಿದ್ದಾರೆ. ಕೂಲಿ ಕಾರ್ಮಿಕರಾಗಿದ್ದ ಅವರು, ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ತುಪ್ಪದಳ್ಳಿಯವರು. ಸದ್ಯ ಮಹದೇವಪುರದಲ್ಲಿ ವಾಸವಿದ್ದರು. ಜ.17ರಂದು ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ನಿಮ್ಹಾನ್ಸ್ಗೆ ಕರೆದೊಯ್ಯಲಾಗಿತ್ತು. 18ರಂದು ಬೆಳಿಗ್ಗೆ ಆಸ್ಟರ್ ಆರ್ವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ 20ರಂದು ವೈದ್ಯರು ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿ, ಅಂಗಾಂಗ ದಾನದ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದರು.
ಮೃತರಿಗೆ ತಂದೆ–ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಪಾಲಕರು ಪುತ್ರನ ಎರಡು ಮೂತ್ರಪಿಂಡಗಳು, ಕಣ್ಣುಗಳು, ಯಕೃತ್ತು ಮತ್ತು ಹೃದಯವನ್ನು ದಾನ ಮಾಡಲು ಸಮ್ಮತಿಸಿದ್ದರು. ಇದರಿಂದ ಏಳು ಮಂದಿಗೆ ಅಂಗಾಂಗಗಳು ದೊರೆತಂತಾಗಿದೆ.
‘ಕಿರಣ್ ನಮ್ಮ ಮನೆಯ ಆಧಾರ ಸ್ತಂಭವಾಗಿದ್ದ. ಆತನ ಹಠಾತ್ ನಿರ್ಗಮನದಿಂದ ಜೀವನದಲ್ಲಿ ಶೂನ್ಯ ಆವರಿಸಿದೆ. ಮತ್ತೊಬ್ಬರ ಜೀವನಕ್ಕೆ ನೆರವಾಗಲಿ ಎಂದು ಅಂಗಾಂಗ ದಾನ ಮಾಡಲು ತೀರ್ಮಾನಿಸಿದೆವು’ ಎಂದು ತಂದೆ ಸ್ವಾಮಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.