ADVERTISEMENT

ವಿಧಾನಸೌಧ ನಿರ್ವಹಣೆಗೂ ಹೊರಗುತ್ತಿಗೆ ನೀಡುವ ದಿನಗಳೂ ದೂರವಿಲ್ಲ: ನಾಗಮೋಹನ್ ದಾಸ್‌

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್ ದಾಸ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 20:29 IST
Last Updated 6 ಜನವರಿ 2023, 20:29 IST
ನಗರದಲ್ಲಿ ಶುಕ್ರವಾರ ಸ್ಲಂ ಜನಾಂದೋಲನ ಕರ್ನಾಟಕ ಹಮ್ಮಿಕೊಂಡಿದ್ದ ಪ್ರತಿನಿಧಿಗಳ ಸಮ್ಮೇಳನದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್ ದಾಸ್‌ ಮಾತನಾಡಿದರು.
ನಗರದಲ್ಲಿ ಶುಕ್ರವಾರ ಸ್ಲಂ ಜನಾಂದೋಲನ ಕರ್ನಾಟಕ ಹಮ್ಮಿಕೊಂಡಿದ್ದ ಪ್ರತಿನಿಧಿಗಳ ಸಮ್ಮೇಳನದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್ ದಾಸ್‌ ಮಾತನಾಡಿದರು.   

ಬೆಂಗಳೂರು: ದೇಶದಲ್ಲಿ ಖಾಸಗೀಕರಣದ ಪರ್ವ ಹೀಗೇ ಮುಂದುವರಿದರೆ ವಿಧಾನಸೌಧ, ಸಂಸತ್‌ ನಿರ್ವಹಣೆಗೂ ಹೊರಗುತ್ತಿಗೆ ನೀಡುವ ದಿನಗಳೂ ದೂರವಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್ ದಾಸ್‌ ಟೀಕಿಸಿದರು.

ಸ್ಲಂ ಜನಾಂದೋಲನ ಕರ್ನಾಟಕ ಸಾವಿತ್ರಿ ಬಾಯಿಫುಲೆ ಅವರ 192ನೇ ಜಯಂತಿ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿನಿಧಿಗಳ ಸಮ್ಮೇಳನದಲ್ಲಿ ‘ವರ್ತಮಾನದಲ್ಲಿ ಸ್ಲಂ ಜನರು ಮತ್ತು ಸಂವಿಧಾನ’ ವಿಷಯ ಕುರಿತು ಅವರು ಮಾತನಾಡಿದರು.

ಮೀಸಲಾತಿ ವಿಷಯದಲ್ಲಿ‌ ಸರ್ಕಾರ ಸಮುದಾಯಗಳ ಮಧ್ಯೆ ಗೊಂದಲ ಸೃಷ್ಟಿಸುತ್ತಿದೆ. ಎಲ್ಲರಿಗೂ ಎಲ್ಲಿಂದ ಮೀಸಲಾತಿ ಕೊಡುತ್ತಾರೆ. ಸಂವಿಧಾನದ ಆಶಯಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಇಂತಹ ಗೊಂದಲಗಳಿಗೆ ಅವಕಾಶವೇ ಇರುವುದಿಲ್ಲ. ಕಲ್ಯಾಣ ರಾಜ್ಯದ ಕನಸೂ ನುಚ್ಚುನೂರಾಗಿದೆ ಎಂದರು.

ADVERTISEMENT

‘ತಳ ವರ್ಗದ ಜನರೇ ಎಲ್ಲ ಕಾಲಘಟ್ಟದಲ್ಲೂ ಭೂಹೀನರು, ಶೋಷಿತರು, ಬಡವರಾಗಿ ಉಳಿದಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ ಅಸಮಾನತೆಗೆ ಜಾತಿ ವ್ಯವಸ್ಥೆಯೆ ಮೂಲ ಕಾರಣ. ಕಸುಬುಗಳ ಆಧಾರದಲ್ಲಿ ಜಾತಿಗಳು ಹುಟ್ಟಿಕೊಂಡವು. ಇಂದು ಕಸುಬುಗಳು ಬದಲಾದರೂ ಜಾತಿ ವ್ಯವಸ್ಥೆ ಬದಲಾಗಲಿಲ್ಲ. ಹೆಣಗಳ ಸಮಾಧಿಗೂ ಜಾತಿ ಹುಡುಕುವ ಮನಸ್ಸು ಸೃಷ್ಟಿಸಿಕೊಂಡಿದ್ದೇವೆ’ ಎಂದು ಅವರು ಹೇಳಿದರು.

ಸಮಾನತೆ, ಸಹಬಾಳ್ವೆಯ ಬದುಕು, ಬಹುತ್ವವನ್ನು ಭಾರತದ ಸಂವಿಧಾನ ಸೊಗಸಾಗಿ ಕಟ್ಟಿಕೊಟ್ಟಿದೆ. ಸಂವಿಧಾನ ನಮ್ಮ ಆತ್ಮವಾಗಿದೆ. ಎಲ್ಲರೂ ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಸಹಿಷ್ಣುತೆ ಮೊದಲು ಕುಟುಂಬದಿಂದಲೇ ಆರಂಭವಾಗಬೇಕು. ಜಾತಿ ಮೀರುವ ಹೆಜ್ಜೆಗೆ ದೃಢ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.

ಲೇಖಕಿ ದು.ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಶಿವಸುಂದರ್‌, ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ಸಂಚಾಲಕಿ ಚಂದ್ರಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.