ADVERTISEMENT

‘ಕಳ್ಳ ಪಾರಿವಾಳ’ ಪಂಜರಕ್ಕೆ!

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 19:00 IST
Last Updated 19 ಜನವರಿ 2019, 19:00 IST

ಬೆಂಗಳೂರು: ಪಾರಿವಾಳ ಹಿಡಿಯುವ ನೆಪದಲ್ಲಿ ಮಹಡಿಗೆ ತೆರಳಿ, ಬೀಗ ಮುರಿದು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಮಂಜುನಾಥ ಅಲಿಯಾಸ್ ಪಾರಿವಾಳ ಮಂಜ (30) ಮಹಾಲಕ್ಷ್ಮಿ ಲೇಔಟ್ ಪೊಲೀಸರ ಪಂಜರ ಸೇರಿದ್ದಾನೆ.

ತಮಿಳುನಾಡಿನ ಮಂಜ, ಹಲವು ವರ್ಷಗಳಿಂದ ಕುರುಬರಹಳ್ಳಿಯಲ್ಲಿ ನೆಲೆಸಿದ್ದ. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕಬ್ಬನ್‌ಪಾರ್ಕ್‌ ಪೊಲೀಸರು ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದ್ದರು. ಒಂದು ವರ್ಷ ಜೈಲು ವಾಸದ ಬಳಿಕ ಬಿಡುಗಡೆಯಾಗಿ ಪುನಃ ಅಪರಾಧ ಕೃತ್ಯ ಮುಂದುವರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ನಿವಾಸಿ ಸತೀಶ್ ಭಟ್ ಎಂಬುವರು, 2018ರ ಮೇ 26ರಂದು ಕುಟುಂಬ ಸಮೇತ ವಿದೇಶಕ್ಕೆ ತೆರಳಿದ್ದರು. ಈ ವೇಳೆ ಆರೋಪಿ ಬೀಗ ಒಡೆದು ಚಿನ್ನಾಭರಣ ದೋಚಿದ್ದ. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ, ಕೃತ್ಯದ ಶೈಲಿಯ ಆಧಾರದ ಮೇಲೆ ಮಂಜನ ಮೇಲೆ ಅನುಮಾನ ವ್ಯಕ್ತವಾಗಿತ್ತು. ಆಗಿನಿಂದಲೂ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿ, ಜ.12ರಂದು ಪೊಲೀಸ್ ಬಲೆಗೆ ಬಿದ್ದಿದ್ದಾನೆ.

ADVERTISEMENT

ನ್ಯಾಯಾಲಯಕ್ಕೆ ಮನವಿ

‘ಜೈಲು ಶಿಕ್ಷೆ ನಂತರವೂ ಮಂಜ ಬುದ್ಧಿ ಕಲಿತಿಲ್ಲ. ಹೀಗಾಗಿ ಯಾವ್ಯಾವ ಪ್ರಕರಣಗಳಲ್ಲಿ ಆತನಿಗೆ ಜಾಮೀನು ಸಿಕ್ಕಿದೆಯೋ, ಆ ಎಲ್ಲ ಜಾಮೀನುಗಳನ್ನು ರದ್ದುಪಡಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು. ಆರೋಪಿಯಿಂದ 250 ಗ್ರಾಂ ಚಿನ್ನ ಹಾಗೂ 1 ಕೆ.ಜಿ ಚಿನ್ನ ಜಪ್ತಿ ಮಾಡಲಾಗಿದೆ’ ಎಂದು ಮಹಾಲಕ್ಷ್ಮಿ ಲೇಔಟ್ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.