ಬೆಂಗಳೂರು: ನೆಲಮಹಡಿ ಯಲ್ಲಿ ಪಾರ್ಕಿಂಗ್ ಎಂದು ತೋರಿಸಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ಮಾಲೀಕರಿಗೆ ನೋಟಿಸ್ ನೀಡಿ ತೆರವುಗೊಳಿಸಬೇಕೆಂದು ಬಿಬಿಎಂಪಿ ವಿಶೇಷ ಆಯುಕ್ತರಾದ (ಹಣಕಾಸು) ನೋಡಲ್ ಅಧಿಕಾರಿ ಲೋಕೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಅಪಾರ್ಟ್ಮೆಂಟ್, ಕಮರ್ಷಿಯಲ್ ಕಾಂಪ್ಲೆಕ್ಸ್, ಹೋಟೆಲ್ ಮಾಲೀಕರು ಕಡ್ಡಾಯವಾಗಿ ನೆಲಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಆ ವಾರ್ಡಿನ ಎಂಜಿನಿಯರ್, ಕಂದಾಯ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಲೀಕರಿಗೆ ನೋಟಿಸ್ ಮೂಲಕ ಎಚ್ಚರಿಸಿ ಎಂದು ಹೇಳಿದರು.
ಪೂರ್ವ, ಪಶ್ಚಿಮ, ಮಹದೇವಪುರ, ಬೊಮ್ಮನಹಳ್ಳಿ, ಬ್ಯಾಟರಾಯನಪುರ, ವಲಯಗಳಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್, ಅಪಾರ್ಟ್ಮೆಂಟ್ ನಗರ ಯೋಜನೆಯಲ್ಲಿ ನಕ್ಷೆ ಮಂಜೂರಾತಿ ಪಡೆದ ನಂತರ ಓಸಿ ಮತ್ತು ಸಿಸಿ ಪಡೆಯದ ಮಾಲೀಕರಿಗೆ ಸಂಬಂಧಪಟ್ಟ ವಾರ್ಡ್ ಎಂಜಿನಿಯರ್, ನಗರ ಯೋಜನೆ ಸಹಾಯಕ ನಿರ್ದೇಶಕರು ಓಸಿ ಮತ್ತು ಸಿಸಿ ಪಡೆದುಕೊಳ್ಳುವಂತೆ ಸೂಚಿಸಬೇಕು. ಓಸಿ ಮತ್ತು ಸಿಸಿ ಪಡೆದುಕೊಂಡರೆ ಪಾಲಿಕೆಗೆ ನೂರಾರು ಕೋಟಿ ತೆರಿಗೆ ಬರುತ್ತದೆ ಎಂದರು.
ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಿಂದ ರೆವಿನ್ಯೂ ನಿವೇಶನ ಮತ್ತು ಮನೆಗಳಿಂದ ಬರಬೇಕಾಗಿರುವ ಬಾಕಿ ವಸೂಲಿ ಮಾಡುವಂತೆ ಆದೇಶ ನೀಡಿದರು. ಜಂಟಿ ಆಯುಕ್ತ ಎಚ್.ಬಾಲಶೇಖರ್, ಉಪ ಆಯುಕ್ತ ವೈ.ಬೈರೇಗೌಡ, ನಗರ ಯೋಜನೆ ಸಹಾಯಕ ನಿರ್ದೇಶಕ ಪ್ರಕಾಶ್, ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.