ಚಿಕ್ಕಬಾಣಾವರದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ಆರಂಭಿಸಿರುವ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಕ್ಕೆ ಶಾಸಕ ಎಸ್. ಮುನಿರಾಜು ಭೇಟಿ ನೀಡಿ ಪರಿಶೀಲಿಸಿ, ನಿಲಯದ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಆರಂಭಿಸಿರುವ ಉದ್ಯೋಗಸ್ಥ ಮಹಿಳೆಯರ ಉಚಿತ ವಸತಿ ನಿಲಯ ಶಿಶುಪಾಲನಾ ಕೇಂದ್ರಕ್ಕೆ ಶಾಸಕ ಎಸ್. ಮುನಿರಾಜು ಪರಿಶೀಲಿಸಿ, ನಿಲಯದ ಅಧಿಕಾರಿಗಳೊಂದಿಗೆ ಚರ್ಚಿಸಿದರು.
‘ಬೆಂಗಳೂರಿನಲ್ಲಿ ಅಸಂಘಟಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್.ಸಿ, ಎಸ್.ಟಿ ಮತ್ತು ಅಲ್ಪಸಂಖ್ಯಾತ ಉದ್ಯೋಗಸ್ಥ ಮಹಿಳೆಯರಿಗೆ ಉಚಿತ ಊಟ–ವಸತಿ ಕಲ್ಪಿಸಲಾಗುತ್ತಿದೆ. ಮಾಸಿಕ ₹50 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವವರು ಈ ಸೌಲಭ್ಯದ ಅವಕಾಶ ಪಡೆಯಬಹುದು’ ಎಂದು ಸುದ್ಳಿಗಾರರಿಗೆ ತಿಳಿಸಿದರು.
ಸದರಿ ವಸತಿ ನಿಲಯದಲ್ಲಿ 50 ಮಹಿಳೆಯರಿಗೆ ವಸತಿ ಸೌಲಭ್ಯವಿದೆ. ಈಗ 24 ಜನರಿದ್ದಾರೆ. ಇಲ್ಲಿಗೆ ಅಗತ್ಯವಿರುವ ಮಂಚ, ಹಾಸಿಗೆಗಳನ್ನು ಒದಗಿಸುವಂತೆ ಸಿಡಿಪಿಒ ಶಕುಂತಲಾ ದೇವಿ ಅವರಿಗೆ ಆದೇಶಿಸಿದರು. ವಸತಿ ನಿಲಯದ ಕಿಟಕಿಗಳಿಗೆ ಪರದೆಗಳು ಮತ್ತು ರಕ್ಷಣೆಗಾಗಿ ಕಟ್ಟಡದ ಸುತ್ತ ಗ್ರಿಲ್ ಅಳವಡಿಸುವಂತೆ ಕಟ್ಟಡದ ಮಾಲೀಕರಿಗೆ ಶಾಸಕರು ಸೂಚಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ) ಶಕುಂತಲಾ ದೇವಿ, ‘ಯಾವುದೇ ಭಾಗದ ಉದ್ಯೋಗಸ್ಥ ಮಹಿಳೆಯರು ಇಲ್ಲಿ ವಸತಿ ಮಾಡಬಹುದು. ಇಲ್ಲಿ ವಸತಿ ಜೊತೆಗೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುವುದು’ ಎಂದು ಹೇಳಿದರು.
‘ಇಲಾಖೆ ವತಿಯಿಂದಲೇ ಇದೇ ಕಟ್ಟಡದಲ್ಲಿ ಶಿಶು ಪಾಲನಾ ಕೇಂದ್ರ ನಡೆಸಲಾಗುತ್ತಿದೆ. ಕೆಲಸಕ್ಕೆ ಹೋಗುವ ದಂಪತಿ ತಮ್ಮ ಪುಟ್ಟ ಮಕ್ಕಳನ್ನು ಇಲ್ಲಿ ಬಿಟ್ಟು ಹೋಗಬಹುದು. ಮಕ್ಕಳಿಗೆ ಹಾಲು, ಊಟದೊಂದಿಗೆ ಉಚಿತ ಪಾಲನಾ ವ್ಯವಸ್ಥೆ ಇರುತ್ತದೆ. ಈಗ ಕೇಂದ್ರಕ್ಕೆ 15 ಮಕ್ಕಳು ಬರುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಮಕ್ಕಳನ್ನು ನೋಡಿಕೊಳ್ಳಲಾಗುತ್ತದೆ’ ಎಂದು ಸಿಡಿಪಿಒ ಮಾಹಿತಿ ನೀಡಿದರು.
ಚಿಕ್ಕಬಾಣಾವರ ಪುರಸಭೆ ಮುಖ್ಯ ಅಧಿಕಾರಿ ಸಂದೀಪ್ ಎಂ, ಸ್ಥಳೀಯ ಮುಖಂಡರಾದ ಬಿ.ಎಂ. ಶ್ರೀನಿವಾಸ ಮೂರ್ತಿ, ವೆಂಕಟೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.