ADVERTISEMENT

ನ್ಯಾಯಾಂಗ ತನಿಖೆಗೆ ಪಿಎಫ್‌ಐ ಆಗ್ರಹ

‘ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಎಸ್‌ಡಿಪಿಐ ಬಲಿಪಶು’

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 22:27 IST
Last Updated 15 ಆಗಸ್ಟ್ 2020, 22:27 IST

ಬೆಂಗಳೂರು:ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಗಳಲ್ಲಿ ನಡೆದ ಘಟನೆಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಪಾಪ್ಯುಲರ್ ಫ್ರಂಟ್‌ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.

ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಈ ಕುರಿತಾಗಿ ಐದು ನಿರ್ಣಯಗಳನ್ನು 7 ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.

ಪ್ರವಾದಿ ಮಹಮ್ಮದರ ಕುರಿತು ನವೀನ್ ಹಾಕಿದ ಪೋಸ್ಟ್‌ ದ್ವೇಷವನ್ನು ಸೃಷ್ಟಿಸುವ, ಮುಸ್ಲಿಮರ ಭಾವನೆಗೆ ಧಕ್ಕೆ ತರುವ ಉದ್ದೇಶ ಹೊಂದಿತ್ತು. ಪೊಲೀಸರು ಸಮಯೋಚಿತವಾಗಿ ಕ್ರಮ ಕೈಗೊಂಡಿದ್ದರೆ ಯಾವುದೇ ಅಹಿತಕರ ಘಟನೆಯೂ ನಡೆಯುತ್ತಿರಲಿಲ್ಲ. ನವೀನ್ ಹಾಗೂ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪಿಎಫ್‌ಐ ಒತ್ತಾಯಿಸಿದೆ.

ADVERTISEMENT

ಇಂತಹ ಹೊತ್ತಿನಲ್ಲಿ ಕಾನೂನುಕೈಗೆತ್ತಿಕೊಳ್ಳುವುದನ್ನು ಸಹಿಸಲಾಗದು. ಡಿ.ಜೆ ಹಳ್ಳಿಯಲ್ಲಿ ನಡೆದ ಹಿಂಸಾಕೃತ್ಯಗಳು, ಪೊಲೀಸ್ ಠಾಣೆಯ ಬಳಿ ನಡೆದ ವಿಧ್ವಂಸಕ ಕೃತ್ಯಗಳು ಅತ್ಯಂತ ದುರದೃಷ್ಟಕರ. ಕಾನೂನು ಕೈಗೆತ್ತಿಕೊಳ್ಳುವುದು ಮತ್ತು ಶಾಂತಿಗೆ ಭಂಗ ಉಂಟು ಮಾಡುವುದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದನ್ನು ಖಂಡಿಸುತ್ತೇವೆ ಎಂದು ಪ್ರಕಟಣೆ ಹೇಳಿದೆ.

ಪೊಲೀಸರು ಮತ್ತು ರಾಜ್ಯ ಸರಕಾರದ ವೈಫಲ್ಯಗಳನ್ನು ಮರೆಮಾಚಲು ಎಸ್‌ಡಿಪಿಐ ಅನ್ನು ಬಲಿಪಶು ಮಾಡಲಾಗುತ್ತಿದೆ. ಅಂದು ಘಟನೆ ನಡೆದಾಗ ಪೊಲೀಸ್ ಇಲಾಖೆಯ ಸಾರ್ವಜನಿಕ ಸಂವಹನ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಾ ಪೊಲೀಸರು ಮತ್ತು ಸ್ಥಳೀಯ ಉಲಮಾಗಳ ಉಪಸ್ಥಿತಿಯಲ್ಲಿ ಅವರು ಸಾರ್ವಜನಿಕರನ್ನು ಸಮಾಧಾನಪಡಿಸುವ ಕೆಲಸವನ್ನು ಎಸ್‌ಡಿಪಿಐ ಕಾರ್ಯಕರ್ತರು ಮಾಡಿದ್ದರು.

ಪರಿಸ್ಥಿತಿಯ ಕಾವನ್ನು ತಣಿಸುವ ಅವರ ನಿರಂತರ ಪ್ರಯತ್ನಗಳನ್ನು ಮಾಡಿದ್ದರೂ ಅವರನ್ನೂ ಹಿಂಸಾಚಾರದ ಆರೋಪಿಗಳನ್ನಾಗಿ ಮಾಡಲಾಗಿದೆ. ಇದು ಸಂಪೂರ್ಣ ಅನೈತಿಕವೂ, ಖಂಡನಾರ್ಹವೂ ಆಗಿದೆ. ಈ ಎಲ್ಲ ಘಟನೆಗಳ ಬಗ್ಗೆ ಸತ್ಯಾಂಶ ಹೊರಗೆ ತರಲು ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಅನಗತ್ಯವಾಗಿ ಬಂಧಿಸಿರುವವ ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪಿಎಫ್‌ಐ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.