ಸಿದ್ದರಾಮಯ್ಯ
ಬೆಂಗಳೂರು: ಆರೋಗ್ಯ ಕ್ಷೇತ್ರಕ್ಕೆ ಅಗತ್ಯವಾದ ತಂತ್ರಜ್ಞಾನ ನೀಡುವಲ್ಲಿ ಮುಂಚೂಣಿಯಲ್ಲಿರುವ ಫಿಲಿಪ್ಸ್ ಕಂಪನಿಯು, ಬೆಂಗಳೂರಿನ ಯಲಹಂಕ ಬಳಿ ತನ್ನ ಹೊಸ ನಾವೀನ್ಯ ಕೇಂದ್ರ (ಇನೊವೇಷನ್ ಕ್ಯಾಂಪಸ್) ಆರಂಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಈ ಕೇಂದ್ರವನ್ನು ಉದ್ಘಾಟಿಸಿದರು.
ಎಂಬಸಿ ಬಿಸಿನೆಸ್ ಹಬ್ನಲ್ಲಿ 6.5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಈ ಕ್ಯಾಂಪಸ್ ನಿರ್ಮಾಣ ಮಾಡಲಾಗಿದೆ. ಏಕಕಾಲಕ್ಕೆ 5 ಸಾವಿರ ವೃತ್ತಿಪರರು ಕೆಲಸ ಮಾಡಬಹುದಾದ ಸಾಮರ್ಥ್ಯವನ್ನು ಇದು ಹೊಂದಿದೆ. ರೋಗಿಗಳ ಆರೈಕೆ, ಉತ್ತಮ ಆರೋಗ್ಯ ಮತ್ತು ಆರೈಕೆಯ ವೆಚ್ಚ ಕಡಿಮೆ ಮಾಡುವಂತಹ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಇದು ನೆರವಾಗಲಿದೆ ಎಂದು ಕಂಪನಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪನಿಯ ಸಿಇಒ ರಾಯ್ ಜಾಕೋಬ್ಸ್, ‘ಭಾರತದಲ್ಲಿ ನಮ್ಮ ಸಾಮರ್ಥ್ಯಗಳನ್ನು ಮತ್ತಷ್ಟು ವಿಸ್ತರಿಸಲು ಇದು ಅನುಕೂಲ ಮಾಡಿಕೊಡಲಿದೆ. ಆರೋಗ್ಯ ರಕ್ಷಣೆಯ ಪರಿಹಾರಗಳನ್ನು ನೀಡುವುದಲ್ಲದೆ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುವುದು’ ಎಂದು ಹೇಳಿದರು
‘ಕಂಪನಿಯ ಜಾಗತಿಕ ಬೆಳವಣಿಗೆಯ ಹಾದಿಯಲ್ಲಿ ಬೆಂಗಳೂರಿನ ಈ ಕೇಂದ್ರವು ಹೆಗ್ಗುರುತು ಆಗುವ ಜೊತೆಗೆ ಭಾರತದಲ್ಲಿ ಆರೋಗ್ಯಸೇವೆಯ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.