ಬೆಂಗಳೂರು: ನಗರವನ್ನು ಕಾಡುತ್ತಿರುವ ಪ್ಲಾಸ್ಟಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆರಂಭವಾದ ‘#ಪ್ಲಾಸ್ಟಿಕ್ ಬೇಕು’ ಅಭಿಯಾನಕ್ಕೆ ಗ್ರಾಹಕ ಉತ್ಪನ್ನ ತಯಾರಿಕಾ ಸಂಸ್ಥೆಎಫ್ಎಂಸಿಜಿ ಹಾಗೂ ರೇಡಿಯೊ ಚಾನಲ್ ಬಿಗ್ ಎಫ್ಎಂ ಕೈಜೋಡಿಸಿವೆ.
ವಿಮಾನ ನಿಲ್ದಾಣ ಆವರಣದೊಳಗೆ 50 ಕಿ.ಮೀ. ಪಥದ ರಸ್ತೆಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ಬಳಸಲಾಗುತ್ತದೆ. ಬಿಐಎಎಲ್ ದತ್ತು ಪಡೆದಿರುವ ಬೆಟ್ಟಕೋಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ವಿಜಯಪುರ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಮಾದರಿ ಶಾಲೆ, ಅರದೇಶನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ದೇವನಹಳ್ಳಿ ತಾಲ್ಲೂಕಿನ ಐದು ಪಂಚಾಯಿತಿಗಳಲ್ಲಿ ಅಭಿಯಾನ ನಡೆಯಲಿದೆ.
‘ಉತ್ತರ ಬೆಂಗಳೂರಿನ ಖಾಸಗಿ ಶಾಲೆಗಳು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳಲ್ಲಿ ಕೂಡ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಪ್ಲಾಸ್ಟಿಕ್ ಮತ್ತು ಬಿಟುಮಿನ್ಗಳನ್ನು ಬಳಸಿ ಪ್ರಯೋಗಾರ್ಥ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇದು ಯಶಸ್ವಿಯಾದ ನಂತರ ಪಾಲಿಮರೈಸ್ಡ್ ರಸ್ತೆಗಳ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ’ ಎಂದುಬಿಐಎಎಲ್ನ ಮುಖ್ಯ ಯೋಜನಾಧಿಕಾರಿ ಟಾಮ್ ಶಿಮಿನ್ ತಿಳಿಸಿದರು.
‘ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ನಿರ್ಮಿಸುವ ರಸ್ತೆಗಳು ಹೆಚ್ಚು ಬಾಳಿಕೆ ಬರಲಿವೆ. ಹಾಗಾಗಿ, ಟನ್ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಅಗತ್ಯವಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.