ಬೆಂಗಳೂರು:ಯಲಹಂಕ ವಲಯವನ್ನು ‘ಪ್ಲಾಸ್ಟಿಕ್ ಮುಕ್ತ’ ಮಾಡುವ ಭಾಗವಾಗಿ ಪಾಲಿಕೆಯ ಅಧಿಕಾರಿಗಳು ವಿವಿಧ ಅಂಗಡಿಗಳು ಹಾಗೂ ಮನೆಗಳ ಮೇಲೆ ಮಂಗಳವಾರ ದಾಳಿ ನಡೆಸಿ 800 ಕೆಜಿ ಪ್ಲಾಸ್ಟಿಕ್ ಜಪ್ತಿ ಮಾಡಿದರು. ಪ್ಲಾಸ್ಟಿಕ್ ಅಂಗಡಿ ಮಾಲೀಕರಿಗೆ ಮತ್ತು ಕಸವನ್ನು ಸರಿಯಾಗಿ ವಿಂಗಡಿಸದವರಿಗೆ ದಂಡ ವಿಧಿಸಲಾಯಿತು.
ಯಲಹಂಕ ವಲಯ ಜಂಟಿ ಆಯುಕ್ತ ಅಶೋಕ್ ನೇತೃತ್ವದಲ್ಲಿ ವಾರ್ಡ್ ಸಂಖ್ಯೆ 8ರ ಕೊಡಿಗೇಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಅಂಗಡಿಗಳಲ್ಲಿ ಇಟ್ಟಿದ್ದ 600 ಕೆಜಿ ಹಾಗೂ ಮನೆಯಲ್ಲಿ ಇರಿಸಲಾಗಿದ್ದ 200 ಕೆಜಿ ಪ್ಲಾಸ್ಟಿಕ್ ಅನ್ನು ಸಿಬ್ಬಂದಿ ವಶಕ್ಕೆ ಪಡೆದರು.
‘ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ, ಮಾರಾಟ ಮತ್ತು ಬಳಕೆ ನಿರಾತಂಕವಾಗಿ ಸಾಗಿದೆ. ಪ್ಲಾಸ್ಟಿಕ್ ಮಾರಾಟ ಮಾಡುವವರಿಗೆ ಮೊದಲು ₹25 ಸಾವಿರ ದಂಡ ವಿಧಿಸಲಾಗುತ್ತದೆ. ಮುಂದುವರಿದರೆ ಎರಡನೇ ಬಾರಿ ₹50 ಸಾವಿರ ದಂಡ ವಿಧಿಸಲು ಅವಕಾಶವಿದೆ. ಸದ್ಯ, ಕೊಡಿಗೇಹಳ್ಳಿಯ ಕೆಲವು ಅಂಗಡಿಗಳಲ್ಲಿನ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದು, ಅಂಗಡಿಗಳಿಗೆ ಬೀಗಮುದ್ರೆ ಹಾಕಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.
ವಾರ್ಡ್ ಸಂಖ್ಯೆ 26ರ ರಾಮಮೂರ್ತಿ ನಗರದಲ್ಲಿ ಕಸವನ್ನು ಸರಿಯಾಗಿ ವಿಂಗಡಿಸದವರಿಂದ ₹10 ಸಾವಿರ ದಂಡ ಸಂಗ್ರಹಿಸಲಾಗಿದೆ. ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದ ಕೊಡಿಗೇಹಳ್ಳಿಯ ಮಾಂಸದಂಗಡಿಯವರಿಗೂ ದಂಡ ವಿಧಿಸಲಾಗಿದೆ.
ಬ್ಯಾಟರಾಯನಪುರ ವಿಭಾಗದಲ್ಲಿ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಕಸ ವಿಂಗಡಣೆ ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.