ಬೆಂಗಳೂರು: ರಾಜಕೀಯ ಮತ್ತು ಧರ್ಮಗಳಿಗೆ ಸಾಹಿತ್ಯ, ವಿಮರ್ಶೆ, ಸಂಶೋಧನೆಗಳು ಬೇಕಾಗಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿನಾಯಕ ಕೃಷ್ಣ ಗೋಕಾಕ್ ವಾಙ್ಮಯ ಟ್ರಸ್ಟ್ ಅಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ ತಿಳಿಸಿದರು.
ವಿನಾಯಕ ಕೃಷ್ಣ ಗೋಕಾಕ್ ವಾಙ್ಮಯ ಟ್ರಸ್ಟ್ ಹಾಗೂ ಎನ್ಎಂಕೆಆರ್ವಿ ಮಹಿಳಾ ಕಾಲೇಜು ಆಯೋಜಿಸಿದ್ದ ‘ಗೋಕಾಕ್ ಸಾಹಿತ್ಯ ಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿರ್ಲಕ್ಷ್ಯಕ್ಕೆ ಒಳಗಾಗಿ ಸೊರಗುತ್ತಿರುವ ಕ್ಷೇತ್ರಗಳಲ್ಲಿ ವಿಮರ್ಶೆ, ಸಂಶೋಧನೆಯೂ ಸೇರಿದೆ. ವಿದ್ಯಾರ್ಥಿಗಳು ಸೇರಿದಂತೆ ಯುವ ಸಮೂಹಕ್ಕೆ ಸಂಶೋಧನಾ ಕೌಶಲದ ಬಗ್ಗೆ ಮನದಟ್ಟು ಮಾಡಿಕೊಡಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ ಎಂದು ಅಭಿಪ್ರಾಯಪಟ್ಟರು.
ಮಾಹಿತಿಯನ್ನು ಕ್ಷಣಮಾತ್ರದಲ್ಲಿಯೇ ಮೊಬೈಲ್, ಲ್ಯಾಪ್ಟಾಪ್, ಪಾಮ್ಟ್ಯಾಪ್ಗಳ ಮೂಲಕ ಪಡೆಯಬಹುದು. ಇದನ್ನೇ ಯುವಜನರು ಅನುಸರಿಸುತ್ತಿದ್ದಾರೆ. ಜ್ಞಾನ ಮತ್ತು ಮಾಹಿತಿ ಬೇರೆ ಬೇರೆ ಎಂಬುದು ಯುವಪೀಳಿಗೆಗೆ ತಿಳಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೇಂದ್ರೆ, ಮಾಸ್ತಿ, ಕುವೆಂಪು, ಗೋಕಾಕ್, ಕಾರಂತ, ಐನ್ಸ್ಟೀನ್ ಇನ್ನಿತರ ದಾರ್ಶನಿಕರ ಬರಹಗಳಿಂದ ನಾವು ಉತ್ಕೃಷ್ಟ ಜ್ಞಾನವನ್ನು ಪಡೆಯಲು ಸಾಧ್ಯ ಎಂದು ಹೇಳಿದರು.
ಕಥೆಗಾರರಾದ ಲಿಂಗರಾಜ ಸೊಟ್ಟಪ್ಪನವರ್, ಅಂಜನಾ ಹೆಗಡೆ ಅವರಿಗೆ ವಿ.ಕೃ. ಗೋಕಾಕ್ ಫೆಲೋಶಿಪ್ ನೀಡಿ ಗೌರವಿಸಲಾಯಿತು. ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ, ಎನ್ಎಂಕೆಆರ್ವಿ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಸಂಧ್ಯಾ ಹೆಗಡೆ ದೊಡ್ಡಹೊಂಡ, ಟ್ರಸ್ಟ್ ಕಾರ್ಯದರ್ಶಿ ನ.ರವಿಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.