ಬೆಂಗಳೂರು: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್ಸಿಎಎಸ್ಆರ್) ಆವರಣದಲ್ಲಿ ಸಂಶೋಧನಾ ವಿದ್ಯಾರ್ಥಿಗಳು, ವಿಜ್ಞಾನಿಗಳು ಮತ್ತು ಅಧ್ಯಾಪಕರು ಗುರುವಾರ ಪ್ರತಿಭಟನೆ ನಡೆಸಿದರು.
‘ದೇಶದ ಹಲವು ಕಡೆಗಳಲ್ಲಿ ಪ್ರತಿಭಟನನಿರತ ವಿದ್ಯಾರ್ಥಿಗಳ ಮೇಲೆಪೊಲೀಸರು ದೌರ್ಜನ್ಯ ನಡೆಸಿರುವುದು ಖಂಡನೀಯ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಎರಡೂ ಅಪಾಯಕಾರಿ. ಇದರಿಂದ ಮುಂದಿನ ದಿನಗಳಲ್ಲಿ ದೇಶವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
‘ಧರ್ಮದ ಆಧಾರದಲ್ಲಿ ನಾಗರಿಕರನ್ನು ವಿಭಜಿಸುವುದು ಆತಂಕಕಾರಿ ಬೆಳವಣಿಗೆ. ಇದರಿಂದ ದೇಶದ ಜಾತ್ಯತೀತ ಮತ್ತು ಪ್ರಜಾತಂತ್ರದ ಬಂಧವೇ ಸಡಿಲವಾಗುತ್ತದೆ. ಈ ಬೆಳವಣಿಗೆಯಿಂದ ತುಂಬಾ ನಮಗೆ ನೋವಾಗಿದೆ. ಧರ್ಮದ ಆಧಾರದ ಮೇಲೆ ಧ್ರುವೀಕರಣ ಮಾಡುವುದನ್ನು ಖಂಡಿಸುತ್ತೇವೆ’ ಎಂದು ತಿಳಿಸಿದ್ದಾರೆ.
‘ಪ್ರಜಾತಂತ್ರ ಆರೋಗ್ಯವಾಗಿ ಇರಬೇಕಾದರೆ, ರಾಜಕೀಯ ಸಂವಾದ ಮತ್ತು ಚರ್ಚೆ ಅತಿ ಮುಖ್ಯ. ಮುಕ್ತ ಚಿಂತನೆ, ಸಂವಾದ ಮತ್ತು ಸ್ವತಂತ್ರ ಅನ್ವೇಷಣೆ ನಡೆಸಲು ಇರುವ ಏಕೈಕ ಸ್ಥಳವೆಂದರೆ ವಿಶ್ವವಿದ್ಯಾಲಯಗಳು. ಈ ಮೂಲಕ ಮುಂದಿನ ತಲೆಮಾರಿನ ಜನಾಂಗವನ್ನು ರೂಪುಗೊಳ್ಳುತ್ತದೆ. ಆದರೆ, ಸರ್ಕಾರಕ್ಕೆ ಈ ವಿಷಯದಲ್ಲಿ ಗೌರವ ಇಲ್ಲ ಎಂಬುದು ಆತಂಕಕಾರಿ ಸಂಗತಿ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.