ಬೆಂಗಳೂರು: ಕೇಂದ್ರ ಸರ್ಕಾರದ ರೈತ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಹೋರಾಡುತ್ತಿರುವ ರೈತರನ್ನು ಬೆಂಬಲಿಸಿ ಸೋಶಿಯಲಿಸ್ಟ್ ಸೆಂಟರ್ ಆಫ್ ಇಂಡಿಯಾದ (ಕಮ್ಯುನಿಸ್ಟ್) ಬೆಂಗಳೂರು ಜಿಲ್ಲಾ ಸಮಿತಿಯು ಮೈಸೂರು ಬ್ಯಾಂಕ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
'ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುತ್ತಿದೆ. ಈಗ ಕೃಷಿ ಕ್ಷೇತ್ರವನ್ನೂ ಖಾಸಗೀಕರಣಗೊಳಿಸಲು ಮುಂದಾಗಿದೆ. ಈ ರೈತವಿರೋಧಿ ನೀತಿಯನ್ನು ಮಣಿಸಲು ಸೇರಿರುವ ರೈತರ ಮೇಲೆ ಲಾಠಿ ಚಾರ್ಜ್, ಜಲಫಿರಂಗಿಯಂತಹ ಕುತಂತ್ರಗಳನ್ನು ಮಾಡಿದರೂ ರೈತರು ಅದನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ' ಎಂದು ಜಿಲ್ಲಾ ಸಮಿತಿಯ ಕಾರ್ಯದರ್ಶಿ ಎಂ.ಎನ್.ಶ್ರೀರಾಮ್ ಹೇಳಿದರು.
'2011ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಕನಿಷ್ಠ ಬೆಂಬಲ ಬೆಲೆಗೆ ಒತ್ತಾಯಿಸಿದ್ದರು. ಆದರೆ, ಸ್ವಾಮಿನಾಥನ್ ಆಯೋಗ ಸೂಚಿಸಿದ್ದ ಕನಿಷ್ಠ ಬೆಂಬಲ ಬೆಲೆಯನ್ನು ಇಂದು ಅವರೇ ನಿರಾಕರಿಸುತ್ತಿರುವುದು ರೈತ ವಿರೋಧಿ ಧೋರಣೆಗೆ ಕೈಗನ್ನಡಿ. ಕೃಷಿ ಕ್ಷೇತ್ರದಲ್ಲಿದ್ದ ನಿಯಂತ್ರಣಗಳನ್ನು ಸಂಪೂರ್ಣವಾಗಿ ನಾಶಗೊಳಿಸಿ, ರೈತರು ಕಾರ್ಪೊರೇಟ್ ಧನದಾಹಿಗಳ ಅನುಕಂಪಕ್ಕೆ ಒಳಗಾಗುವಂತೆ ಪರಿಸ್ಥಿತಿ ಸೃಷ್ಟಿಸುತ್ತಿದ್ದಾರೆ' ಎಂದು ಆರೋಪಿಸಿದರು.
ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಂ.ಶಶಿಧರ್,' ನೂತನ ಕೃಷಿ ನೀತಿಗಳು ರೈತರಿಗೆ ಮರಣ ಶಾಸನವಾಗಿವೆ. ರೈತರನ್ನು ಸ್ವಲ್ಪಮಟ್ಟಿಗಾದರೂ ಬೆಂಬಲಿಸುತ್ತಿದ್ದ ಎಪಿಎಂಸಿಗಳೂ ಇತಿಹಾಸದ ಪುಟ ಸೇರಲಿವೆ‘ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.