ADVERTISEMENT

ನೇಮಕಾತಿ ಅಕ್ರಮ: ಪಿಎಸ್‌ಐ ಬಂಧನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 21:15 IST
Last Updated 6 ಅಕ್ಟೋಬರ್ 2022, 21:15 IST
   

ಬೆಂಗಳೂರು: 545 ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದ ಕೆ.ಆರ್.ಪುರ ಸಂಚಾರ ಠಾಣೆ ಪಿಎಸ್‌ಐ ಸುಬ್ರಮಣಿ (35) ಅವರನ್ನು ಸಿಐಡಿ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಎಡಿಜಿಪಿ ಅಮ್ರಿತ್ ಪೌಲ್, ಡಿವೈಎಸ್ಪಿ ಶಾಂತಕುಮಾರ್ ಸೇರಿದಂತೆ 60ಕ್ಕೂ ಹೆಚ್ಚು ಆರೋಪಿಗಳನ್ನು ಪ್ರಕರಣದಲ್ಲಿ ಈಗಾಗಲೇ ಬಂಧಿಸಲಾಗಿದೆ.

‘ಪಿಎಸ್ಐ ಅಕ್ರಮ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸುಬ್ರಮಣಿ ತಲೆಮರೆಸಿಕೊಂಡಿದ್ದ. ಬೆಂಗಳೂರಿನಲ್ಲಿ ಗುರುವಾರ ಈತನನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಪೊಲೀಸ್ ನೇಮಕಾತಿ ವಿಭಾಗದ ಸಿಬ್ಬಂದಿ ಜೊತೆ ಪಿಎಸ್‌ಐ ಸುಬ್ರಮಣಿ ಒಡನಾಟ ಹೊಂದಿದ್ದ. ಸಂಬಂಧಿಯೂ ಆಗಿದ್ದ ಅಭ್ಯರ್ಥಿ ಶಿವರಾಜ್ ಹಾಗೂ ಮನು ಕಡೆಯಿಂದ ಲಕ್ಷಾಂತರ ರೂಪಾಯಿ ಪಡೆದಿದ್ದ ಸುಬ್ರಮಣಿ, ಅದನ್ನು ನೇಮಕಾತಿ ವಿಭಾಗದ ಸಿಬ್ಬಂದಿಗೆ ಕೊಟ್ಟಿದ್ದ. ಇಬ್ಬರ ಒಎಂಆರ್ ಪ್ರತಿ ತಿದ್ದುಪಡಿ ಮಾಡಿದ್ದ ಸಿಬ್ಬಂದಿ, ಅಕ್ರಮವಾಗಿ ಆಯ್ಕೆಯಾಗುವಂತೆ ಮಾಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

‘ಪ್ರಕರಣದಲ್ಲಿ ಈಗಾಗಲೇ ಶಿವರಾಜ್ ಹಾಗೂ ಮನುನನ್ನು ಬಂಧಿಸಲಾಗಿದೆ. ಇವರಿಬ್ಬರು ಸುಬ್ರಮಣಿ ಹೆಸರು ಬಾಯ್ಬಿಟ್ಟಿದ್ದರು’ ಎಂದೂ ಹೇಳಿವೆ.

ಉತ್ತರ ಭಾರತದಲ್ಲಿ ಸುತ್ತಾಟ: ‘ಬಂಧನ ಭೀತಿಯಲ್ಲಿ ರಾಜ್ಯವನ್ನು ತೊರೆದಿದ್ದ ಪಿಎಸ್‌ಐ ಸುಬ್ರಮಣಿ, ಉತ್ತರ ಭಾರತದ ರಾಜ್ಯಗಳಲ್ಲಿ ಸುತ್ತಾಡುತ್ತಿದ್ದ. ಪ್ರಕರಣದ ತನಿಖೆಯ ಕಾವು ಕಡಿಮೆಯಾಗಿರಬಹುದುಎಂದು ತಿಳಿದು ಇತ್ತೀಚೆಗಷ್ಟೇ ನಗರಕ್ಕೆ ಬಂದಿದ್ದ. ಖಚಿತ ಮಾಹಿತಿ ಸಂಗ್ರಹಿಸಿ ಈತನನ್ನು ಸೆರೆಹಿಡಿಯಲಾಯಿತು’ ಎಂದು ಸಿಐಡಿ ಮೂಲಗಳುತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.