ADVERTISEMENT

ಎಲ್ಲ ತಪ್ಪಿತಸ್ಥರಿಗೂ ಕಠಿಣ ಶಿಕ್ಷೆಯಾಗಬೇಕು: ಸಿದ್ದರಾಮಯ್ಯ

ಗಲಭೆ ಪ್ರದೇಶ ಪರಿಶೀಲಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 20:24 IST
Last Updated 2 ಸೆಪ್ಟೆಂಬರ್ 2020, 20:24 IST
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗಲಭೆ ನಡೆದಿದ್ದ ಕಾವಲ್‌ ಬೈರಸಂದ್ರಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗಲಭೆ ನಡೆದಿದ್ದ ಕಾವಲ್‌ ಬೈರಸಂದ್ರಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಬೆಂಗಳೂರು: ‘ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ತಪ್ಪಿತಸ್ಥರಿಗೂ ಕಠಿಣ ಶಿಕ್ಷೆಯಾಗಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಗಲಭೆ ನಡೆದಿದ್ದ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಸಿದ್ದರಾಮಯ್ಯ, ಅಧಿಕಾರಿಗಳಿಂದ ಪ್ರಕರಣದ ಮಾಹಿತಿ ಪಡೆದರು. ಪ್ರಕರಣದ ಪೂರ್ವಾಪರ ಪರಿಶೀಲಿಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿದರು.

ಈ ಬಗ್ಗೆ ಟ್ವೀಟ್‌ ಮಾಡಿದ ಅವರು, ‘ಒಂದು ವೇಳೆ ಪ್ರವಾದಿ ಮಹಮದ್ ಅವರ ವಿರುದ್ಧ ನಿಂದನಾತ್ಮಕ ಬರಹ ಪ್ರಕಟಿಸಿದ ನವೀನ್‌ನ ಶೀಘ್ರ ಬಂಧನವಾಗಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತಿರಲಿಲ್ಲವೇನೊ’ ಎಂದಿದ್ದಾರೆ.

ADVERTISEMENT

‘ಗಲಭೆ ಸಂದರ್ಭದಲ್ಲಿ ಹಾನಿಗೊಳಗಾಗಿದ್ದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಹಾಗೂ ಪೊಲೀಸ್ ಠಾಣೆಗೆ ಭೇಟಿ ನೀಡಿ, ಡಿಸಿಪಿ ಶರಣಪ್ಪ ಅವರಿಂದ ಘಟನೆಯ ಮಾಹಿತಿ ಪಡೆದುಕೊಂಡೆ. ಶಾಸಕರಾದ ರಿಜ್ವಾನ್ ಅರ್ಷದ್, ನಸೀರ್ ಅಹ್ಮದ್, ವೆಂಕಟರಮಣಪ್ಪ ಜೊತೆಗಿದ್ದರು. ಗಲಭೆ ಸಂದರ್ಭದಲ್ಲಿ ನಾನು ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಗುಣಮುಖನಾದ ಬಳಿಕ ಕೆಲವು ದಿನ ಹೋಂ ಕ್ವಾರೆಂಟೈನ್‌ಗೂ ಒಳಗಾಗಿದ್ದೆ. ಈ ಎಲ್ಲ ಕಾರಣಗಳಿಂದಾಗಿ ಸ್ಥಳಕ್ಕೆ ಈಗ ಭೇಟಿ ನೀಡಿದ್ದೇನೆ’ ಎಂದಿದ್ದಾರೆ.

‘ಪ್ರಕರಣದಲ್ಲಿ ಭಾಗಿಯಾಗದ ಹಲವರು ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಹೀಗಾಗಿ, ಯಾರ ವಿರುದ್ಧ ಸೂಕ್ತ ಸಾಕ್ಷ್ಯಗಳಿಲ್ಲ, ಯಾರು ನಿರಪರಾಧಿಗಳಿದ್ದಾರೆ ಅಂಥವರನ್ನು ಕೂಡಲೇ ಬಿಡುಗಡೆ ಮಾಡಬೇಕು. ನೈಜ ಅಪರಾಧಿಗಳು ಯಾರೇ ಆಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ತನಿಖೆಗೆ ಮೊದಲೇ ಗೃಹ ಸಚಿವರು ಕೆಲವರ ಹೆಸರನ್ನು ಹೇಳಿದ್ದಾರೆ. ಆದರೆ, ನಾವು ಆ ರೀತಿ ಮಾಡುವುದಿಲ್ಲ. ತನಿಖೆ ನಡೆದು ಸತ್ಯಾಂಶ ಬಯಲಾಗಲಿ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.