ADVERTISEMENT

ಕುರಿ ರಕ್ಷಿಸಲು ಹೋಗಿ ಪ್ರಾಣಬಿಟ್ಟ ಕುರಿಗಾಹಿ

ಹೆಬ್ಬಾಳ ಬಳಿ ರೈಲಿಗೆ ಸಿಲುಕಿ ಚನ್ನಪ್ಪ ಸಾವು

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:15 IST
Last Updated 14 ಮೇ 2019, 20:15 IST

ಬೆಂಗಳೂರು: ರೈಲು ಬರುತ್ತಿದ್ದ ವೇಳೆಯಲ್ಲಿ ಹಳಿ ಮೇಲೆ ಓಡಾಡುತ್ತಿದ್ದ ಕುರಿಗಳನ್ನು ರಕ್ಷಿಸಲು ಹೋಗಿ ಕುರಿಗಾಹಿಯೇ ಮೃತಪಟ್ಟಿರುವ ದಾರುಣ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.

ಹೆಬ್ಬಾಳದ ನಿವಾಸಿ ಚನ್ನಪ್ಪ (70) ಮೃತರು. ಮಗನ ಜೊತೆ ಕುರಿಗಳನ್ನು ಮೇಯಿಸಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ.

’ಚನ್ನಪ್ಪ ಹಾಗೂ ಅವರ ಮಗ, 20ಕ್ಕೂ ಹೆಚ್ಚು ಕುರಿಗಳನ್ನು ಸಾಕಿದ್ದರು. ಅವುಗಳನ್ನು ಮೇಯಿಸಲು ನಿತ್ಯವೂ ಇಬ್ಬರೂ ಜೊತೆಯಾಗಿ ಹೋಗುತ್ತಿದ್ದರು’ ಎಂದು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಹೇಳಿದರು.

ADVERTISEMENT

‘ಬೈಯಪ್ಪನಹಳ್ಳಿ ಹಾಗೂ ಹೆಬ್ಬಾಳ ನಿಲ್ದಾಣಗಳ ನಡುವಿನ ಹಳಿ ಪಕ್ಕದಲ್ಲಿ ಮಂಗಳವಾರ ಕುರಿಗಳನ್ನು ಮೇಯಿಸುತ್ತಿದ್ದರು. ಸಂಜೆ 4ರ ಸುಮಾರಿಗೆ ಕೆಲ ಕುರಿಗಳು ಹಳಿ ಮೇಲೆ ಓಡಾಡುತ್ತಿದ್ದವು. ಅದೇ ವೇಳೆಯೇ ರೈಲು ಬರುತ್ತಿತ್ತು. ಅದನ್ನು ಗಮನಿಸಿದ ಚನ್ನಪ್ಪ, ಹಳಿಯತ್ತ ಓಡಿಹೋಗಿ ಕುರಿಗಳನ್ನು ಓಡಿಸಲು ಯತ್ನಿಸಿದ್ದರು. ವೇಗವಾಗಿ ಬಂದ ರೈಲು, ಅವರಿಗೆ ಗುದ್ದಿ ಮೈ ಮೇಲೆ ಹರಿದು ಹೋಗಿತ್ತು’ ಎಂದು ವಿವರಿಸಿದರು.

‘ರೈಲಿನಡಿ ಸಿಲುಕಿ ಚನ್ನಪ್ಪ ಅವರ ತಲೆ ಹಾಗೂ ಕಾಲುಗಳು ತುಂಡರಿಸಿ ದೇಹವೇ ಛಿದ್ರವಾಗಿದೆ.ಮಗನ ಎದುರೇ ಈ ಘಟನೆ ನಡೆದಿದ್ದು, ಅವರೇ ದೂರು ಕೊಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

ಎರಡು ಕುರಿಗಳು ಸಾವು: ‘ಚನ್ನಪ್ಪ ಅವರ ಜೊತೆಯಲ್ಲೇ ಎರಡು ಕುರಿಗಳು ಸಹ ರೈಲಿಗೆ ಸಿಲುಕಿ ಮೃತಪಟ್ಟಿವೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.