ADVERTISEMENT

ಮಳೆ; ರಸ್ತೆ, ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:42 IST
Last Updated 24 ಸೆಪ್ಟೆಂಬರ್ 2019, 19:42 IST
ಲಿ ಮೆರಿಡಿಯನ್ ಅಂಡರ್‌ಪಾಸ್‌ನಲ್ಲಿ ನಿಂತಿದ್ದ ಮಳೆನೀರಿನಲ್ಲಿ ಪರದಾಡಿದ ವಾಹನ ಸವಾರರು –ಪ್ರಜಾವಾಣಿ ಚಿತ್ರ
ಲಿ ಮೆರಿಡಿಯನ್ ಅಂಡರ್‌ಪಾಸ್‌ನಲ್ಲಿ ನಿಂತಿದ್ದ ಮಳೆನೀರಿನಲ್ಲಿ ಪರದಾಡಿದ ವಾಹನ ಸವಾರರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ದೊಡ್ಡನೆಕ್ಕುಂದಿ ವಾರ್ಡ್‌ನ ಕುಂದಲಹಳ್ಳಿ ಗ್ರಾಮದ ಅನೇಕ ಮನೆಗಳಿಗೆ ನೀರು ನುಗ್ಗಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಎರಡು ದಿನಗಳಿಂದ ನಗರದಲ್ಲಿ ವರ್ಷಧಾರೆ ಆಗುತ್ತಿದೆ. ಮಲ್ಲೇಶ್ವರ, ಕೆ.ಆರ್‌.ಪುರ, ಮಾರತ್ತಹಳ್ಳಿ, ಕಾರ್ಪೊರೇಷನ್‌, ಹಲಸೂರು ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಆಗಿದೆ.

ಕುಂದಲಹಳ್ಳಿಯ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಮನೆಯ ಒಳಗಿದ್ದ ವಸ್ತುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದರು.

ADVERTISEMENT

ಹಲಸೂರು ಕೆರೆ ಬಳಿ, ಹಳೆ ಮದ್ರಾಸ್‌ ರಸ್ತೆ, ವಿಕ್ಟೋರಿಯಾ ರಸ್ತೆ, ಹಳೆ ರೇಸ್‌ಕೋರ್ಸ್‌ ರಸ್ತೆ, ಮಡಿವಾಳ, ಸಿಲ್ಕ್‌ ಬೋರ್ಡ್‌, ಕೋರಮಂಗಲದಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆ ಉಂಟಾಗಿದೆ. ಲಿ ಮೆರಿಡಿಯನ್ ಬಳಿಯ ಅಂಡರ್ ಪಾಸ್ ಸೇರಿದಂತೆ ವಿವಿಧ ಅಂಡರ್ ಪಾಸ್‌ಗಳ ಮೇಲೆ ನೀರು ನಿಂತು ಸಂಚಾರ ದಟ್ಟಣೆ ಉಂಟಾಯಿತು. ಸೋಮವಾರ ತಡರಾತ್ರಿ ಸುರಿದ ಮಳೆಗೆ ಜೋಗುಪಾಳ್ಯ, ಸುಬ್ರಮಣ್ಯಪುರ ಹಾಗೂ ವಿವೇಕನಗರದಲ್ಲಿ ತಲಾ ಒಂದು ಮರ ನೆಲಕ್ಕುರುಳಿವೆ. ವಿವೇಕ ನಗರದಲ್ಲಿ ಒಂದು ಕಾರು ಮತ್ತು ಬೈಕ್ ಜಖಂಗೊಂಡಿವೆ ಎಂದು ಎಂದು ಬಿಬಿಎಂಪಿ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದರು.

ಎಲ್ಲಿ, ಎಷ್ಟು ಮಳೆ?
ಕೆ.ಆರ್.ಪುರದಲ್ಲಿ 31.5 ಅತಿ ಹೆಚ್ಚು ಮಿ.ಮೀ ಮಳೆಯಾಗಿದೆ. ದೊಡ್ಡಜಾಲ 22.5 ಮಿ.ಮೀ, ರಾಮಮೂರ್ತಿ ನಗರ 19 ಮಿ.ಮೀ, ಹುಸ್ಕೂರು 11.5 ಮಿ.ಮೀ, ಬಾಣಸವಾಡಿ 9 ಮಿ.ಮೀ, ಸಂಪಂಗಿ ರಾಮನಗರ ಮಿ.ಮೀ, ದಾಸನಾಪುರ, ವರ್ತೂರಿನಲ್ಲಿ ತಲಾ 8.5 ಮಿ.ಮೀ, ಯಲಹಂಕ 8 ಮಿ.ಮೀ, ಬೂದಿಗೆರೆ 5 ಮಿ.ಮೀ, ಹೆಸರಘಟ್ಟ ಹಾಗೂ ರಾಜಾನುಕುಂಟೆಯಲ್ಲಿ ತಲಾ 3.5 ಮಿ.ಮೀ, ಮಳೆ ಆಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.