ಬೆಂಗಳೂರು: ‘ನಿವಾರ್’ ಚಂಡಮಾರುತದ ಪರಿಣಾಮದಿಂದ ನಗರದಾದ್ಯಂತ ಗುರುವಾರ ದಿನವಿಡೀ ಜಿಟಿಜಿಟಿ ಮಳೆ ಸುರಿಯಿತು.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ‘ನಿವಾರ್’ ಚಂಡಮಾರುತದಿಂದಾಗಿ ನಗರದಲ್ಲಿ ಮಳೆಯಾಯಿತು. ಧಾರಾಕಾರ ಮಳೆ ಸಂಭವಿಸದೆ, ದಟ್ಟವಾದ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆ ನಿರಂತರವಾಗಿ ಸುರಿಯಿತು. ಮಳೆಯ ನಡುವೆಯೂ ಚಳಿ ತೀವ್ರವಾಗಿತ್ತು. ‘ನಿವಾರ್’ನಿಂದ ನಗರದಲ್ಲಿ ಸರಾಸರಿ 3 ಸೆಂ.ಮೀಗಿಂತ ಕಡಿಮೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೆಂಗೇರಿ, ಮೈಸೂರು ರಸ್ತೆ, ವಿಜಯನಗರ, ರಾಜಾಜಿನಗರ, ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಶಾಂತಿನಗರ, ಜಯನಗರ, ಚಾಮರಾಜಪೇಟೆ, ಹೆಬ್ಬಾಳ, ಯಲಹಂಕ, ಬನಶಂಕರಿ, ರಾಜರಾಜೇಶ್ವರಿ ನಗರ ಸೇರಿದಂತೆ ಬಹುತೇಕ ಎಲ್ಲ ಬಡಾವಣೆಗಳಲ್ಲಿ ತುಂತುರು ಮಳೆ ಮಧ್ಯಾಹ್ನದವರೆಗೆ ಸುರಿಯಿತು. ಸಂಜೆ ವೇಳೆಗೆ ಏರತೊಡಗಿದ ಮಳೆ ರಾತ್ರಿವರೆಗೆ ನಿರಂತರವಾಗಿ ಸುರಿಯಿತು.
‘ಯೆಲ್ಲೊ ಅಲರ್ಟ್’ ಮುಂದುವರಿಕೆ: ‘ನಿವಾರ್’ ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ಶುಕ್ರವಾರವೂ ಮಳೆಯಾಗುವ ಮುನ್ಸೂಚನೆ ಇರುವುದರಿಂದ ‘ಯೆಲ್ಲೊ ಅಲರ್ಟ್’ ಮುಂದುವರಿಸಲಾಗಿದೆ. ಶನಿವಾರದವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.