ಕೆಂಗೇರಿ: ನಗರದ ಉಲ್ಲಾಳು ವ್ಯಾಪ್ತಿಯ ನಾಗದೇವನಹಳ್ಳಿ, ರಾಮನಾಥ ಬಡಾವಣೆ, ಬೃಂದಾವನ ಬಡಾವಣೆ ಸುತ್ತಮುತ್ತಲಿನ ನೂರಾರು ಮನೆಗಳಿಗೆ ಬುಧವಾರ ರಾತ್ರಿ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು.
ಮಲ್ಲತ್ತಹಳ್ಳಿ, ಮರಿಯಪ್ಪನ ಪಾಳ್ಯ ನಾಗದೇವನಹಳ್ಳಿ ಸುತ್ತಮುತ್ತಲಿನ ಬಡಾವಣೆಗಳ ಮಳೆನೀರು ರಾಜಕಾಲುವೆ ಮುಖಾಂತರ ವೃಷಭಾವತಿ ನದಿಗೆ ಸೇರುತ್ತದೆ. ಆದರೆ ಈ ಭಾಗದಲ್ಲಿ ರಾಜಕಾಲುವೆ ಬಹುತೇಕ ಒತ್ತುವರಿಯಾಗಿದೆ. ಹೀಗಾಗಿ, ಪ್ರತಿವರ್ಷ ಮಳೆ ಬಂದಾಗ ಇದೇ ಸಮಸ್ಯೆ ಇಲ್ಲಿನ ಜನರನ್ನು ಬಾಧಿಸುತ್ತಿದೆ. ಮಳೆ ನೀರು ಮನೆಗೆ ನುಗ್ಗಿದಾಗ ಕಾಟಾಚಾರಕ್ಕೆ ಬಂದು ವಿಚಾರಿಸುವ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತೆ ಇತ್ತ ಸುಳಿಯುವುದೇ ಇಲ್ಲ’ ಎಂದು ರಾಮನಾಥ ಬಡಾವಣೆಯ ಗೃಹಿಣಿ ಮಮತಾ ಆಕ್ರೋಶ ವ್ಯಕ್ತಪಡಿಸಿದರು.
ರಾಜಕಾಲುವೆ ಮೇಲೆಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಇಂತಹ ಒತ್ತುವರಿಯಿಂದ ಹಿಮ್ಮುಖವಾಗಿ ಮಳೆ ನೀರು ಹರಿದು ಸುತ್ತಮುತ್ತ ಬಡಾವಣೆಗೆ ನುಗ್ಗಿ ಬರುತ್ತಿದೆ. ಮನೆಯಲ್ಲಿರುವ ದವಸ ಧಾನ್ಯ, ಬಟ್ಟೆ, ಫ್ರಿಡ್ಜ್, ಟಿವಿ ಹಾಳಾಗಿದೆ. ರಾತ್ರಿಯೆಲ್ಲಾ ಜಾಗರಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ’ ಎಂದು ಸ್ಥಳೀಯ ನಿವಾಸಿ ಬೃಂದಾ ಅಳಲು ತೋಡಿಕೊಂಡರು. ಮಳೆ ನೀರು ಜೊತೆಗೆ ಒಳಚರಂಡಿ ನೀರು ಸೇರಿ ಹರಿಯುತ್ತಿದ್ದು, ದುರ್ವಾಸನೆ ಬೀರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮಳೆಹಾನಿ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.